ಹಿಂದೂಗಳ ವಿರುದ್ಧ ನಿಲ್ಲುವ ಶಕ್ತಿ ಯಾರಿಗೂ ಇಲ್ಲ: ಮೋಹನ್ ಭಾಗವತ್
ಹೈದರಾಬಾದ್: ಹಿಂದೂಗಳು ಯಾರ ವಿರೋಧಿಗಳು ಅಲ್ಲ. ಹಿಂದೂಗಳು ಎಷ್ಟು ಶಕ್ತರೆಂದರೆ ಅವರ ವಿರುದ್ಧ ನಿಲ್ಲುವ ಶಕ್ತಿ ಯಾರಿಗೂ ಇಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಹಿಂದೂ ಧರ್ಮ ಶತಮಾನಗಳಿಂದ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದ್ದು, ಪ್ರಗತಿ ಸಾಧಿಸಿದೆ ಎಂದವರು ಹೇಳಿದರು.
‘ಶತಮಾನದಿಂದ ವಿಶ್ವದಾದ್ಯಂತ ಹಿಂದೂಗಳನ್ನು ನಾಶ ಮಾಡಲು ಪ್ರಯತ್ನಿಸಿದವರು ತಮ್ಮಲ್ಲೇ ಜಗಳವಾಡುತ್ತಿದ್ದಾರೆ. ನಮ್ಮನ್ನು ನಾಶ ಮಾಡಲು ಪ್ರಯತ್ನಿಸಲಾಯಿತು. ಆದರೆ ಅದು ಸಫಲವಾಗಲಿಲ್ಲ. ಇಂದಿಗೂ ಭಾರತದ ಸನಾತನ ಧಾರ್ಮಿಕ ಜೀವನವನ್ನು ಯಥಾಸ್ಥಿತಿಯಲ್ಲಿ ಕಾಣಬಹುದು. ಇಷ್ಟೆಲ್ಲ ದೌರ್ಜನ್ಯಗಳ ನಡುವೆಯೂ ನಮ್ಮಲ್ಲಿ ‘ಮಂತ್ರ ಭೂಮಿ’ ಇದೆ. ನಮ್ಮಲ್ಲಿ ಸಾಕಷ್ಟು ಸಂಪನ್ಮೂಲಗಳು ಇರುವಾಗ ಏಕೆ ಭಯಪಡಬೇಕು? ಏಕೆಂದರೆ ನಮ್ಮನ್ನು ನಾವು ಮರೆಯುತ್ತೇವೆ. ಜೀವನದ ಬಗೆಗಿನ ನಮ್ಮ ಸಮಗ್ರ ದೃಷ್ಟಿಕೋನವನ್ನು ಮರೆತಿರುವುದು ದೌರ್ಬಲ್ಯಕ್ಕೆ ಕಾರಣವಾಗಿದೆ’ ಎಂದು ತಿಳಿಸಿದರು.




