December 15, 2025

ಸುಳ್ಯ: ನಗರದಲ್ಲಿ ಭಾರಿ ಚರ್ಚೆಗೆ ಗ್ರಾಸವಾದ ಕೆಸರು ಮಿಶ್ರಿತ ನೀರು ಸರಬರಾಜು:
ಕಲ್ಲುಮುಟ್ಲು ನೀರಿನ ಶುದ್ಧೀಕರಣ ಘಟಕಕ್ಕೆ ಸುಳ್ಯ ನ್ಯಾಯಾಧೀಶರುಗಳ ದಿಢೀರ್ ಭೇಟಿ

0
IMG-20211026-WA0036.jpg

ಸುಳ್ಯ: ನಗರ ವ್ಯಾಪ್ತಿಯಲ್ಲಿ ಕಳೆದ ಹಲವಾರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ನಗರ ಪಂಚಾಯತ್ ವತಿಯಿಂದ ಸರಬರಾಜಾಗುವ ಕುಡಿಯುವ ನೀರು ಪೂರ್ತಿ ಕೆಸರು ಮಿಶ್ರಿತವಾಗಿದ್ದು ಕೆಂಪು ಬಣ್ಣದ ನೀರು ಬರುತಿದ್ದು ಸಾರ್ವಜನಿಕರು ಸಮಸ್ಯೆಯನ್ನು ಎದುರಿಸುತ್ತಿದ್ದರು. ಘಟನೆಯ ಬಗ್ಗೆ ಮಾಹಿತಿ ತಿಳಿದ ಸುಳ್ಯ ನ್ಯಾಯಾಲಯದ ನ್ಯಾಯಾಧೀಶರುಗಳಾದ ಹಿರಿಯ ನ್ಯಾಯಾಧೀಶ ಸೋಮಶೇಖರ್, ಕಿರಿಯ ನ್ಯಾಯಾಧೀಶ ಯಶವಂತ್ ಕುಮಾರ್ ಇಂದು ಸಂಜೆ ಕಲ್ಲುಮುಟ್ಲು ನೀರು ಸರಬರಾಜು ಕೇಂದ್ರಕ್ಕೆ ದಿಢೀರ್ ಭೇಟಿ ನಡೆಸಿ ಸ್ಥಳಕ್ಕೆ ಅಧಿಕಾರಿಗಳನ್ನು ಕರೆಸಿ ಕೆಂಪು ಮಿಶ್ರಿತ ನೀರು ಸರಬರಾಜಿನ ಕುರಿತು ತರಾಟೆಗೆ ತೆಗೆದುಕೊಂಡರು.

ಈ ಸಂದರ್ಭದಲ್ಲಿ ಸ್ಪಷ್ಟನೆ ನೀಡಿದ ಸುಳ್ಯ ನಗರ ಪಂಚಾಯತ್ ಇಂಜಿನಿಯರ್ ಶಿವಕುಮಾರ್ ರವರು ಕಳೆದ ಕೆಲವು ದಿನಗಳ ಹಿಂದೆ ಸುರಿಯುತ್ತಿರುವ ಭಾರಿ ಮಳೆಗೆ ಹೊಳೆಯ ನೀರು ಕೆಂಪು ಬಣ್ಣದಿಂದ ಕೂಡಿದ್ದು ನಗರದ ಕೆಲವು ಕಡೆ ನಲ್ಲಿಗಳಲ್ಲಿ ಈ ನೀರು ಬಂದಿರುತ್ತದೆ. ನೀರಿನ ಶುದ್ಧಿಕರಣದ ಘಟಕದ ಯಂತ್ರಗಳು ಹಳೆಯದಾಗಿದ್ದು, ನೂತನ ಯಂತ್ರಕ್ಕೆ ಸರಕಾರಕ್ಕೆ ಬೇಡಿಕೆ ಸಲ್ಲಿಸಿದ್ದೇವೆ ಹಾಗು ನಮ್ಮ ಬೇಡಿಕೆಗೆ ಅನುಗುಣವಾಗಿ ನೀರಿನ ಶುದ್ಧೀಕರಣ ಘಟಕ ಕಡಿಮೆ ಇರುವ ಕಾರಣ ಈ ಸಮಸ್ಯೆ ಬಂದಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಸಮಸ್ಯೆ ಬಾರದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಿರಿಯ ನ್ಯಾಯಾಧೀಶ ಯಶವಂತ್ ಕುಮಾರ್ ಸಾರ್ವಜನಿಕರಿಗೆ ಕುಡಿಯುವ ನೀರು ಸರಿಯಾಗಿ ನೀಡಲು ಸಾಧ್ಯವಾಗದಿದ್ದರೆ ನೀವೇನು ಕೆಲಸ ಮಾಡುತ್ತಿದ್ದೀರಿ, ನಿಮ್ಮ ಮಾತಿನ ಪ್ರಕಾರ ನೀವು ನೀಡುವ ನೀರನ್ನು ಬೇಕಾದರೆ ಉಪಯೋಗಿಸಿ, ಇಲ್ಲದಿದ್ದರೆ ಊರು ಬಿಟ್ಟು ತೊಲಗಿ ಎಂದು ಅರ್ಥವೇ,? ಎಂದು ಪ್ರಶ್ನಿಸಿದರು. ನಗರದ ಜನತೆಗೆ ಅನುಗುಣವಾಗಿ ನೀರಿನ ಬೇಡಿಕೆ ಹೆಚ್ಚು ಇರಬೇಕಾದರೆ ನಿಮ್ಮ ದೂರದೃಷ್ಟಿಯಿಂದ ಯೋಜನೆಯನ್ನು ರೂಪಿಸಬೇಕಾದುದು ನೀವಲ್ಲವೇ ಎಂದು ಕೇಳಿದರು.

ಹಿರಿಯ ನ್ಯಾಯಾಧೀಶ ಸೋಮಶೇಖರ್ ಮಾತನಾಡಿ ನೀವು ಅಧಿಕಾರಿಗಳು ಸಾರ್ವಜನಿಕರ ಸೇವೆಗಾಗಿ ಕೆಲಸ ನಿರ್ವಹಿಸುತ್ತಿದ್ದೀರಿ. ಆದ್ದರಿಂದ ಸುಳ್ಯದ ಬಡ ಜನತೆ ಇದೇ ನೀರನ್ನು ನಂಬಿಕೊಂಡು ಇರುವಾಗ ಅಂತವರಿಗೆ ಕುಡಿಯಲು ಶುದ್ದ ನೀರು ಕೊಡಬೇಕಾದ ಜವಾಬ್ದಾರಿ ಸ್ಥಳೀಯ ಪಂಚಾಯಿತಿ ನವರ ದಲ್ಲವೇ ಎಂದು ಕೇಳಿದರು. ನಗರ ಪಂಚಾಯತಿಗೆ ಪೂರ್ಣ ಅಧಿಕಾರವಿದೆ. ಸಾರ್ವಜನಿಕರಿಗೆ ಬೇಕಾದ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ, ನಗರ ಪ್ರದೇಶಗಳಲ್ಲಿ ಚರಂಡಿಗಳ ವ್ಯವಸ್ಥೆಗಳನ್ನು ಸರಿಪಡಿಸಿಕೊಡುವುದು ನಿಮ್ಮ ಜವಾಬ್ದಾರಿ. ಈ ಜವಾಬ್ದಾರಿಯಿಂದ ತಪ್ಪಿಸಿಕೊಂಡರೆ ಸಾರ್ವಜನಿಕರು ಯಾರನ್ನು ಕೇಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಗರ ಪಂಚಾಯಿತಿ ಮುಖ್ಯ ಅಧಿಕಾರಿ ಎಂ ಆರ್ ಸ್ವಾಮಿ ಕೂಡಲೇ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಶುದ್ಧ ನೀರು ನೀಡುವ ವ್ಯವಸ್ಥೆ ಮಾಡುತ್ತೇವೆ ಎಂದು ನ್ಯಾಯಾಧೀಶರ ಬಳಿ ಹೇಳಿದರು.
ಈ ಸಂದರ್ಭ ಮೊದಲು ಈ ಕೆಲಸವನ್ನು ಮಾಡಿ. ನೀವು ಇದರ ಬಗ್ಗೆ ಕೈಗೊಂಡಿರುವ ಕ್ರಮದ ಕುರಿತು ನಾಳೆನೇ ನಮಗೆ ವರದಿ ಸಲ್ಲಿಸಬೇಕು ಎಂದು ಹೇಳಿದರು. ಇಲ್ಲದಿದ್ದರೆ ನಾವು ನಿಮ್ಮ ಮೇಲೆ ಕ್ರಮ ಕೈಗೊಳ್ಳುವ ವಿಧಾನವನ್ನು ಅನುಸರಿಸ ಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಸುಳ್ಯ ನ್ಯಾಯಾಲಯದ ಎಪಿಪಿ ಜನಾರ್ಧನ್, ವಕೀಲರ ಸಂಘದ ಅಧ್ಯಕ್ಷ ಎಂ ವೆಂಕಪ್ಪ ಗೌಡ, ನಗರ ಪಂಚಾಯತಿ ಸದಸ್ಯ ಕೆ.ಎಸ್ ಉಮ್ಮರ್, ಮುಖಂಡರುಗಳಾದ ಸುಂದರ ಪಾಠಜೆ, ಉನೈಸ್ ಪೆರಾಜೆ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!