ಆದಾಯ ತೆರಿಗೆ ಅಧಿಕಾರಿಗಳ ಸೋಗಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯ ಮನೆಗೆ ನುಗ್ಗಿ ದರೋಡೆ: ಪತ್ರಕರ್ತ ಸಹಿತ ಐವರ ಬಂಧನ
ಬೆಂಗಳೂರು: ಆದಾಯ ತೆರಿಗೆ ಅಧಿಕಾರಿಗಳ ಸೋಗಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯ ಮನೆಗೆ ನುಗ್ಗಿ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಪತ್ರಕರ್ತ ಸಹಿತ ಐವರನ್ನು ಸಂಜಯನಗರ ಪೊಲೀಸರು ಬಂಧಿಸಿದ್ದಾರೆ.
ಸಂಜಯನಗರ ನಿವಾಸಿ ಎಂ.ಮಜುನಾಥ (35), ಕಾವಲ್ ಬೈರಸಂದ್ರದ ಮೊಹಮ್ಮದ್ ಶೋಯೆಬ್ ರಬ್ಟಾನಿ ಅಲಿಯಾಸ್ ಫಕರ್ ಅಲಿ (32), ಸಹಕಾರ ನಗರದ ಟಿ.ಸಿ.ಪ್ರಶಾಂತ್ ಕುಮಾರ್ (40), ಯಶವಂತಪುರದ ವೈ.ಸಿ. ದುಗೇìಶ (30) ಹಾಗೂ ಆರ್.ಟಿ. ನಗರದ ಕೆ.ಕುಮಾರ್(40) ಬಂಧಿತರು. ಆರೋಪಿಗಳಿಂದ 1.70 ಲಕ್ಷ ರೂ. , 2 ಪಿಸ್ತೂಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳು ಜ.23ರಂದು ಬೆಳಗ್ಗೆ 8.45ರ ಸುಮಾರಿಗೆ ಸಂಜಯನಗರದ ಕ್ಯಾಡ್ಮೆಟ್ ಲೇಔಟ್ ನಿವಾಸಿ ಆರ್.ಚೇತನ್ ಎಂಬವರ ಮನೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಸೋಗಿನಲ್ಲಿ ದಾಳಿ ಮಾಡಿ, ಕಬೋರ್ಡ್ನಲ್ಲಿದ್ದ 3.5 ಲಕ್ಷ ರೂ. ಹಾಗೂ 1 ಪಿಸ್ತೂಲ್ ದರೋಡೆ ಮಾಡಿ ಪರಾರಿಯಾಗಿದ್ದರು.
ಆರಂಭದಲ್ಲಿ ಐಟಿ ಅಧಿಕಾರಿಗಳೇ ಎಂದು ನಂಬಿದ್ದ ಚೇತನ್ಗೆ ಮಧ್ಯಾಹ್ನ ಅನುಮಾನ ಉಂಟಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಈ ದೂರಿನ ಮೇರೆಗೆ ಸಂಜಯನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಜೆ.ಬಾಲರಾಜ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದಾಗ ನಕಲಿ ಅಧಿಕಾರಿಗಳು ಎಂಬುದು ಗೊತ್ತಾಗಿದೆ. ಬಳಿಕ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.




