ಕನ್ನಡ ಚಿತ್ರ ನಿರ್ಮಾಪಕನ ಕೊಲೆಗೆ ಸಂಚು: ಇಬ್ಬರು ಆರೋಪಿಗಳ ಬಂಧನ
ಬೆಂಗಳೂರು: ಕನ್ನಡ ಚಿತ್ರ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರ ಕೊಲೆಗೆ ಸಂಚು ರೂಪಿಸಿದ್ದ ಆರೋಪದ ಮೇರೆಗೆ ಇಬ್ಬರು ಆರೋಪಿಗಳನ್ನು ನಗರದ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ. ಈ ಇಬ್ಬರೂ ಆರೋಪಿಗಳು ಸುಮಾರು ಒಂದು ವರ್ಷದಿಂದ ತಲೆ ಮರೆಸಿಕೊಂಡಿದ್ದರು.
ದರ್ಶನ್ ಮತ್ತು ಸಂಜು ಬಂಧಿತ ಆರೋಪಿಗಳು. ಸುಂಕದಕಟ್ಟೆ ಬಳಿಯ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಆರೋಪಿಗಳು ಇರುವ ಬಗ್ಗೆ ದೊರತ ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ಮಾಡಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಲನಚಿತ್ರ ನಿರ್ಮಾಪಕ ಉಮಾಪತಿ ಮತ್ತು ಅವರ ಸಹೋದರ ದೀಪಕ್ ಗೌಡ ಅವರನ್ನು ಹತ್ಯೆ ಮಾಡಲು ಯೋಜಿಸುತ್ತಿದ್ದ ತಂಡವನ್ನು ಡಿಸೆಂಬರ್ 2020 ರಲ್ಲಿ, ಜಯನಗರ ಪೊಲೀಸರು ಬಂಧಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ 16 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಉಮಾಪತಿಯೊಂದಿಗೆ ವ್ಯಾಪಾರ ವೈಷಮ್ಯ ಹೊಂದಿದ್ದ ವ್ಯಕ್ತಿಯೊಬ್ಬನಿಂದ ಗ್ಯಾಂಗ್ ಸುಪಾರಿ ಪಡೆದಿದ್ದು, ಉಮಾಪತಿಯನ್ನು ಕೊಲಲ್ಲು ಸುಪಾರಿ ಪಡೆದಿರುವುದು ಪತ್ತೆಯಾಗಿದೆ.




