ಮಂಗಳೂರು: ರಸ್ತೆ ಕಾಮಗಾರಿಗೆ ತಂದಿದ್ದ ಕಬ್ಬಿಣ ಸರಳು ಕಳ್ಳತನ: ಮೂವರ ಬಂಧನ
ಮಂಗಳೂರು: ಸ್ಮಾಟ್ಸಿಟಿ ಕಾಮಗಾರಿ ನಿರ್ವಹಿಸುತ್ತಿದ್ದ ಜಾಗದಲ್ಲಿ ತಂದು ಹಾಕಿದ್ದ ಕಬ್ಬಿಣದ ಸರಳುಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂದರು ಠಾಣಾ ಪೊಲೀಸರು ರೆಡ್ ಹ್ಯಾಂಡಾಗಿ ಬಂಧಿಸಿದ್ದಾರೆ.
ಮೂವರು ಕೂಡಾ ಅನ್ಯ ಜಿಲ್ಲೆಯ ಕಳ್ಳರು ಎಂದು ಪೊಲೀಸರು ತಿಳಿಸಿದ್ದು, ಮೊಗ್ರೋಡಿ ಕನ್ಸ್ಟ್ರಕ್ಷನ್ಗೆ ಸೇರಿದ ಕಾಮಗಾರಿ ನಗರದ ಪಿ.ಎ ರಾವ್ ರಸ್ತೆಯಲ್ಲಿ ನಡೆಯುತ್ತಿದೆ.
ಒಳಚರಂಡಿ ನಿರ್ವಹಣೆ ಸೇರಿದಂತೆ ಹಲವು ಕಾಮಗಾರಿಗಳನ್ನು ಇಲ್ಲಿ ನಡೆಸಲಾಗುತ್ತಿತ್ತು. ಕಾಮಗಾರಿ ನಿರ್ವಹಿಸಲೆಂದು ತಂದು ಹಾಕಿದ್ದ ಕಬ್ಬಿಣದ ರಾಡ್ಗಳನ್ನು ಕೊಂಡು ಹೋಗುತ್ತಿದ್ದಾಗ ಮೂವರು ಆರೋಪಿಗಳನ್ನು ಬಂದರು ಪೊಲೀಸ್ ಸಿಬ್ಬಂದಿಗಳಾದ ದಾಮೋದರ, ಗುರುನಾಥ ಹಾಗೂ ಮಂಜು ಎಂಬವರು ಸಾರ್ವಜನಿಕರ ಸಹಕಾರದ ಮೂಲಕ ಬಂಧಿಸಿದ್ದಾರೆ.
ಕಳವು ಮಾಡಲು ಯತ್ನಿಸುತ್ತಿದ್ದ ಕಬ್ಬಿಣದ ರಾಡ್ಗಳ ಅಂದಾಜು ಮೌಲ್ಯ 6ರಿಂದ 7 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




