ವಿಟ್ಲ: ಪ.ಪಂ ಸಿಬ್ಬಂದಿ ಡೆತ್ ನೋಟು ಬರೆದಿಟ್ಟು ಆತ್ಮಹತ್ಯೆಗೆ ಯತ್ನ:
ಪಂಚಾಯತ್ ಮಾಜಿ ಸದಸ್ಯನ ಮಾನಸಿಕ ಹಿಂಸೆ ಆರೋಪ
ವಿಟ್ಲ: ಪಟ್ಟಣ ಪಂಚಾಯತ್ ಸಿಬ್ಬಂದಿಯೊಬ್ಬರು ಡೆತ್ ನೋಟು ಬರೆದಿಟ್ಟು ಬಂಟ್ವಾಳ ನೇತ್ರಾವತಿ ಸೇತುವೆಯ ಬಳಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು, ಸ್ಥಳೀಯರು ಆತನನ್ನು ಸೇತುವೆಯ ಬಳಿ ಕಂಡು ತಡೆದು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ವಿಟ್ಲ ಪಟ್ಟಣ ಪಂಚಾಯತ್ ನಲ್ಲಿ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ರಾಜೇಶ್ ಎಂಬವರು ಆತ್ಮಹತ್ಯೆಗೆ ಯತ್ನಿಸಿದವರು.
ವಿಟ್ಲದ ಮಂಗಳಪದವು ಎಂಬಲ್ಲಿಯ ವ್ಯಕ್ತಿಯೊಬ್ಬರಿಗೆ ಮನೆ ಮಂಜೂರಾತಿ ವಿಚಾರದಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯರೊಬ್ಬರು ರಾಜೇಶ್ ಅವರ ಮೇಲೆ ಲಂಚ ಕೇಳಿದ್ದಾರೆ ಎಂದು ಆರೋಪ ವ್ಯಕ್ತಪಡಿಸಿದ್ದರು. ಈ ಬಗ್ಗೆ ವರದಿ ಪ್ರಕಟಗೊಂಡಿತ್ತು.
ಇಂದು ಬೆಳಿಗ್ಗೆ ರಾಜೇಶ್ ಕೆಲವರಿಗೆ ವಾಟ್ಸಾಪ್ ನಲ್ಲಿ ವಾಯ್ಸ್ ಮೆಸೇಜ್ ಕಳುಹಿಸಿದ್ದು, ನನ್ನ ಬಗ್ಗೆ ಸುಳ್ಳು ಆರೋಪ ಮಾಡಿದ್ದು, ಇದರಿಂದ ಮಾನಸಿಕವಾಗಿ ಮನನೊಂದಿರುತ್ತೇನೆ. ಆದುರಿಂದ ನಾನು ಆತ್ಮಹತ್ಯೆ ಮಾಡುತ್ತೇನೆ ಎಂದು ಸಂದೇಶ ಕಳುಹಿಸಿದ್ದು, ಬಳಿಕ ಡೆತ್ ನೋಟು ಬರದಿದ್ದು, ಅದರಲ್ಲಿಯೂ ಕೂಡಾ ಇದೇ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.
ಈ ವಿಚಾರ ರಾಜೇಶ್ ಸ್ನೇಹಿತರ ಗಮನಕ್ಕೆ ಬಂದಿದ್ದು, ತಕ್ಷಣವೇ ಅವರು ರಾಜೇಶ್ ಗಾಗಿ ಹುಟುಕಾಟ ಪ್ರಾರಂಭಿಸಿದ್ದು, ನೇತ್ರಾವತಿ ಸೇತುವೆಯಲ್ಲಿ ಪತ್ತೆಯಾಗಿದ್ದಾನೆ. ಅಲ್ಲಿಂದ ರಕ್ಷಿಸಿ ಕರೆ ತಂದಿದ್ದಾರೆ.






