ಕಾಂಗ್ರೆಸ್ ನಾಯಕರು ಜನತೆಯ ಪರವಾದ ಹೋರಾಟಕ್ಕಾಗಿ ಜೈಲಿಗೆ ಹೋಗಲು ಸಿದ್ಧ: ವಸಂತ ಬಂಗೇರ.
ಬೆಳ್ತಂಗಡಿ: ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ನಡೆಯುವ ಮೇಕೆದಾಟು ಪಾದಯಾತ್ರೆ ಹತ್ತಿಕ್ಕುವ ಹುನ್ನಾರದಿಂದ ಬಿಜೆಪಿ ಸರಕಾರ ಕೊರೋನ ಪಾಸಿಟಿವಿಟಿ ದರ ಹೆಚ್ಚಿಗೆ ತೋರಿಸುತ್ತಿದೆ. ಹಾಗೂ ಅನಗತ್ಯವಾಗಿ ವಾರಾಂತ್ಯ ಕರ್ಫ್ಯೂ ಜಾರಿಗೆ ತಂದಿದೆ. ಆ ಮೂಲಕ ಪಾದಯಾತ್ರೆ ನಡೆಸಿದ ನಾಯಕರನ್ನು ಬಂಧಿಸುವ ಸಂಚು ಮಾಡುತ್ತಿದ್ದು, ಕಾಂಗ್ರೆಸ್ ನಾಯಕರು ಜನತೆಯ ಪರವಾದ ಹೋರಾಟಕ್ಕಾಗಿ ಜೈಲಿಗೆ ಹೋಗಲು ಸಿದ್ಧವಾಗಿದ್ದಾರೆ. ಸರಕಾರಕ್ಕೆ ತಾಕತ್ತಿದ್ದರೆ ಮೇಕೆದಾಟು ಹೋರಾಟಗಾರರನ್ನು ಬಂಧಿಸಲಿ ಎಂದು ಮಾಜಿ ಶಾಸಕ ವಸಂತ ಬಂಗೇರ ಸವಾಲೆಸೆದಿದ್ದಾರೆ.
ಬಿಜೆಪಿ ಸರಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ, ವಾರಾಂತ್ಯ ಕರ್ಪ್ಯೂ-ಲಾಕ್ ಡೌನ್ ಹುನ್ನಾರ, ಕೊರೋನ ಹೆಸರಲ್ಲಿ ಜನರ ಬದುಕನ್ನ ನಾಶ ಮಾಡುತ್ತಿದೆ ಎಂದು ಆರೋಪಿಸಿ, ಸರಕಾರದ ಧೋರಣೆಯನ್ನು ಖಂಡಿಸಿ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ, ಕಾರ್ಮಿಕ ಸಂಘಟನೆಗಳು, ಜೆಡಿಎಸ್, ರಾಜ್ಯ ರೈತಸಂಘ(ಹಸಿರು ಸೇನೆ) ಹಾಗೂ ದಲಿತ ಸಂಘಟನೆಗಳ ಸಹಭಾಗಿತ್ವದಲ್ಲಿ ಬೆಳ್ತಂಗಡಿ ಮಿನಿವಿಧಾನ ಸೌಧ ಎದುರು ಬುಧವಾರ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಸರಕಾರ ಜನರನ್ನು ಮನೆಯಲ್ಲಿ ಕೂಡಿ ಹಾಕುವ ಕಾರ್ಯಕ್ಕೆ ಮುಂದಾಗುತ್ತಿದೆ ಇದನ್ನು ಇನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಸರಕಾರ ಕೂಡಲೇ ಕರ್ಫ್ಯೂ ಲಾಕ್ ಡೌನ್ ನಿಲ್ಲಿಸಬೇಕು ಎಂದವರು ಆಗ್ರಹಿಸಿದರು.

ಕೋವಿಡ್ ನಿಂದ ಸಾವನ್ನಪ್ಪಿದವರಿಗೆ ಸರಕಾರ ಪರಿಹಾರ ಕೊಡುವುದಾಗಿ ಹೇಳಿದ್ದು, ಹಣ ಬಂದಿಲ್ಲ. ದೇಶದಲ್ಲಿ ಕೋವಿಡ್ ತಡೆ ಲಸಿಕೆಯಿಂದಾಗಿಯೇ ಅನೇಕ ಮಂದಿ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ. ಅವರಿಗೆ ಪರಿಹಾರ ಕೊಟ್ಟಿದ್ದೀರಾ ಎಂದು ಪ್ರಶ್ನಿಸಿದ ವಸಂತ ಬಂಗೇರ, ಪುದುವೆಟ್ಟು ಗ್ರಾಮದ ಕೃಷಿಕ ಕುಕ್ಕ ಗೌಡ ಎಂಬವರು ಲಸಿಕೆ ಪಡೆದ ನಂತರವೇ ಆರೋಗ್ಯ ಹದಗೆಟ್ಟು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ರೈತ ಸಂಘ ಹಸಿರುಸೇನೆಯ ಸುರೇಶ್ ಭಟ್ ಕೊಜಂಬೆ, ಕಾರ್ಮಿಕ ಹೋರಾಟಗಾರ ಬಿ.ಎಂ.ಭಟ್, ಉಭಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಶೈಲೇಶ್ ಕುಮಾರ್ ಮತ್ತು ರಂಜನ್ ಜಿ. ಗೌಡ, ಜೆಸಿಎಸ್ ಅಧ್ಯಕ್ಷ ಪ್ರವೀಣ್ ಚಂದ್ರ ಜೈನ್ ಮಾತನಾಡಿದರು.
ಸಭೆಯಲ್ಲಿ ಮುಖಂಡರಾದ, ಎ.ಸಿ ಮಾಥ್ಯೂ, ನಮಿತಾ ಪೂಜಾರಿ, ಪ್ರವೀಣ್ ಗೌಡ, ಉಷಾ ಶರತ್, ಮಂಜುನಾಥ ಲಾಯಿಲ, ವಿನ್ಸೆಂಟ್ ಡಿಸೋಜ, ವಿನುಷಾ ಪ್ರಕಾಶ್, ಖಾಲಿದ್ ಕಕ್ಕೇನ, ಅಬ್ಬಾಸ್ ಬಟ್ಲಡ್ಕ, ಲಕ್ಷ್ಮಣ ಗೌಡ ಬಂಗಾಡಿ, ನಾಮದೇವ ರಾವ್ ಮುಂಡಾಜೆ, ಸಂದೀಪ್ ನೀರಲ್ಕೆ, ಕೇಶವ ಪಿ. ಗೌಡ , ಬಿ.ಕೆ.ವಸಂತ, ಅಶ್ವತ್ಥ ರಾಜ್, ವಂದನಾ ಭಂಡಾರಿ, ವಸಂತಿ ಸಿ. ಪೂಜಾರಿ, ನೇಮಿರಾಜ ಗೌಡ, ಜಗದೀಶ್ ಡಿ., ಜನಾರ್ದನ, ಮೆಹಬೂಬ್, ದಿನೇಶ್ ಕೋಟ್ಯಾನ್, ದಯಾನಂದ ಬೆಳಾಲು ರೋಯಿ ಜೋಸೆಫ್ ಪುದುವೆಟ್ಟು, ಇಸ್ಮಾಯೀಲ್ ಪೆರಿಂಜೆ, ನೆಬಿಸಾ ಮೊದಲಾದವರು ಭಾಗವಹಿಸಿದ್ದರು.




