ಬದುಕು ಅರಸಿ ಬಂದವರ ಬದುಕು ದಿಕ್ಕಾಪಾಲು:
ಸುಳ್ಯ ಜಾತ್ರೆಗೆ ಬಂದ ಅಲೆಮಾರಿಗಳ ಬದುಕು ಸಂಕಷ್ಟದಲ್ಲಿ
ಸುಳ್ಯ: ಜಾತ್ರೆಯ ಸಂಭ್ರಮ ಆರಂಭವಾಗಿ ನಾಲಕ್ಕು ಐದು ದಿನಗಳು ಕಳೆದರೂ ತೊಟ್ಟಿಲು ಆಟಿಕೆಗಳನ್ನು ಕಟ್ಟಿ ಜೀವನ ಅರಸಿ ಬಂದ ಜನರ ಜೀವನ ಇನ್ನು ಆರಂಭವಾಗಲೇ ಇಲ್ಲ.



ಕಳೆದ ಎರಡು ವರ್ಷಗಳಿಂದ ಜಾತ್ರೆ ಹಾಗೂ ಎಕ್ಸಿಬಿಷನ್ ಕಾರ್ಯಕ್ರಮಗಳನ್ನು ನಂಬಿ ಬದುಕುತ್ತಿದ್ದ ಅಮ್ಯೂಸ್ಮೆಂಟ್ ಜನರಿಗೆ ಈ ಬಾರಿ ಕೊರೊನಾ ಮತ್ತೆ ಒಕ್ಕರಿಸಿದೆ. ಇದೀಗ ಮತ್ತೆ ರಾಜ್ಯದಲ್ಲಿ ನೈಟ್ ಕಫ್ಯೂ, ವೀಕೆಂಡ್ ಕರ್ಫ್ಯೂ ಜಾರಿಗೊಳಿದ್ದು ಸುಳ್ಯ ಜಾತ್ರ ಕಾರ್ಯಕ್ರಮಕ್ಕೆ ಮತ್ತೆ ಸಂಕಷ್ಟ ಎದುರಾಗಿದೆ.
ಪ್ರತಿವರ್ಷ ಜನವರಿ 10 ರಂದು ಸುಳ್ಯದ ಆರಾಧ್ಯ ದೈವ ಶ್ರೀ ಚೆನ್ನಕೇಶವನಿಗೆ ಜಾತ್ರೆಯ ಸಂಭ್ರಮ ನಡೆಯುತ್ತದೆ. ಈ ಜಾತ್ರೆಯಿಂದ ಸುಳ್ಯ ಮಾತ್ರವಲ್ಲದೇ ಸುತ್ತಮುತ್ತಲ ಹಾಗೂ ಪರವೂರಿನ ಸಾವಿರಾರು ಮಂದಿ ಸುಳ್ಯಕ್ಕೆ ಬಂದು ಚೆನ್ನಕೇಶವನ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.
ಸುಳ್ಯ ಜಾತ್ರೆಗೆ ಜಾತ್ರೆಯ ಸೌಂದರ್ಯವನ್ನು ಹೆಚ್ಚಿಸಲು
ಜಾಯಿಂಟ್ ವೀಲ್, ಬ್ರೇಕ್ ಡ್ಯಾನ್ಸ್, ಕೊಲಾಂಬಾಸ್, ಡ್ರಾಗನ್ ಟ್ರೆ, ತೊಟ್ಟಿಲುಗಳು ಮಕ್ಕಳ ಆಟಿಕೆಗಳು, ಜಾತ್ರೆ ನಡೆಯುವ ಪರಿಸರದಲ್ಲಿ ದೂರ ದೂರದ ಊರಿನಿಂದ ಬಂದ ವಿವಿಧ ಸಾಮಗ್ರಿಗಳ ಮಳಿಗೆಗಳು, ಮಕ್ಕಳ ಆಟಿಕೆಯ ಸಾಮಾಗ್ರಿಗಳ ಅಂಗಡಿಗಳು, ಇದರ ಸವಿಯನ್ನು ಪಡೆಯುವ ಸಾವಿರಾರು ಮುಂದಿ ಜನತೆಗಳು ನೋಡುಗರ ಕಣ್ಮನ ಸೆಳೆಯುವಂತಿರುತ್ತದೆ.ಇದು ಬಹುದೊಡ್ಡ ಆಕರ್ಷಣೆಗಳು. ಇದರಲ್ಲಿ ಕುಳಿತು ಸಂಭ್ರಮಿಸಲೆಂದೇ ಸಾವಿರಾರು ಮಂದಿ ಬರುತ್ತಾರೆ. ಆದರೆ ಈ ಬಾರಿ ಕೊರೊನಾ ಕರಿನೆರಲು ಮತ್ತೆ ಒಕ್ಕರಿಸಿದೆ.
ಬದುಕು ಕಟ್ಟಿಕೊಳ್ಳಲು ಆರಂಭಿಸುತ್ತಿದ್ದ ಬಡ ಜೀವಗಳು ಮತ್ತೆ ಆತಂಕಕ್ಕೆ ಸಿಲುಕಿದಂತಿದೆ.
ವಾರದ ಹಿಂದೆ ಸುಳ್ಯಕ್ಕೆ ಈ ಆಟಿಕೆಗಳು ಬಂದಿದ್ದು ಅದು ಸುಳ್ಯ ತಲುಪಿ ಜೋಡಣೆ ಕಾರ್ಯ ನಡೆಯುತ್ತಿದ್ದಂತೆ ಸರಕಾರದ ಕರ್ಫ್ಯೂ ನಿಯಮ ಹೊರ ಬಿತ್ತು. ಇದರಿಂದಾಗಿ ಇದನ್ನೇ ನಂಬಿಕೊಂಡು ಜೀವನ ನಡೆಸುವ ಕೆಲಸಗಾರರು ತಲೆ ಮೇಲೆ ಕೈ ಹೊತ್ತುಕೊಳ್ಳುವಂತಾಗಿದೆ.
ರಾಜ್ಯದ ವಿವಿಧ ಮೂಲೆಗಳಿಂದ ಹತ್ತಕ್ಕೂ ಹೆಚ್ಚು ಲಾರಿಗಳಲ್ಲಿ ಲಕ್ಷಾನುಗಟ್ಟಲೆ ಹಣ ಖರ್ಚು ವಹಿಸಿ ಆಟಿಕೆಗಳನ್ನು ಸಿದ್ಧಪಡಿಸಿ ಸರ್ಕಾರದ ಆದೇಶಗಳು ಬದಲಾಗಿ ನಮ್ಮ ಯಂತ್ರಗಳು ತಿರುಗಬಹುದು ಎಂಬ ಆಸೆಯೊಂದಿಗೆ ಕಾಯುತ್ತಿದೆ ನೂರಾರು ಬದುಕುಗಳು. ನಮ್ಮ ಜತೆಗೆ ಇದನ್ನೆ ನಂಬಿಕೊಂಡಿರುವ ನೂರಕ್ಕೂ ಹೆಚ್ಚು ನೌಕರರು ಇದ್ದಾರೆ. ಸರ್ಕಾರ ಏಕಾಏಕಿ ನೈಟ್ ಕರ್ಫ್ಯೂ ಮತ್ತು ವಾರದ ಕರ್ಫ್ಯೂ ಏರಿ ನಮ್ಮ ಜೀವನ ದುಸ್ತರ ಗೊಂಡಿದೆ ಎಂದು ಅಮ್ಯೂಸ್ ಮೆಂಟ್ ನ ಪಾಲುದಾರ ಬಾಲಕೃಷ್ಣ ಶೆಟ್ಟಿ ಕಾರ್ಕಳ ತಮ್ಮ ನೋವನ್ನು ಹಂಚಿಕೊಳ್ಳುತ್ತಿದ್ದಾರೆ.
“ಇದು ನಮಗೆ ಸೀಸನ್ ಸಮಯ. ಕಳೆದ ಬಾರಿಯೂ ನಮಗೆ ಲಾಸ್. ಈ ಬಾರಿ ಇಲ್ಲಿಗೆ ಬಂದ ಮೇಲೆ ಹೀಗಾಗಿದೆ. ಏನು ಮಾಡೋದು. ಒಬ್ಬೊಬ್ಬರಿಗೆ ಕನಿಷ್ಟ 2. ರಿಂದ 3 ಲಕ್ಷ ನಷ್ಟವಾಗಬಹುದು. ನಮಗೆ ಸೋಮವಾರದಿಂದಾದರೂ ಅವಕಾಶ ನೀಡಿದರೆ ಇಲ್ಲಿಗೆ ಬಂದಿರುವ ಖರ್ಚಾದರೂ ಸರಿದೋಗಿಸಬಹುದಾಗಿತ್ತು ಎಂಬ ಆಶಯವನ್ನು ಕೆಲಸಗಾರರು ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರಗಳು ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರಗಳನ್ನು ಕೈಗೊಂಡು ಈ ರೀತಿ ಕಷ್ಟಗಳನ್ನು ಅನುಭವಿಸುವ ಬಡಜೀವಗಳಿಗೆ ಪರಿಹಾರಗಳನ್ನು ನೀಡಿ, ಅವರ ನಷ್ಟಗಳನ್ನು ಬರಿಸಲು ಸಾಧ್ಯವಾಗದೇ ಇದ್ದರೂ ಅವರು ಅನುಭವಿಸುವ ನೋವಿಗೆ ಪರಿಹಾರವನ್ನು ನೀಡಿ ಅವರಲ್ಲಿ ಧೈರ್ಯ ತುಂಬುವ ಕಾರ್ಯವನ್ನು ಮಾಡಬೇಕಾಗಿದೆ.
ಇದು ಕೇವಲ ಜಾತ್ರೆಯನ್ನು ನಂಬಿ ಸುಳ್ಯಕ್ಕೆ ಬಂದ ಅಲೆಮಾರಿಗಳ ಮಾತ್ರ ಅಳಲು ಅಲ್ಲ. ಸುಳ್ಯ ನಗರದ ಪ್ರತಿಯೊಂದು ವ್ಯಾಪಾರ ಕೇಂದ್ರಗಳು ಇದಕ್ಕೆ ಹೊರತಾಗಿ ಇಲ್ಲ.
ಜನಸಂದಣಿಯಿಂದ ಕಂಗೊಳಿಸ ಬೇಕಾಗಿದ್ದ ಸುಳ್ಯದ ಮುಖ್ಯ ಬೀದಿಗಳು ವಾರಾಂತ್ಯದ ಕರ್ಫ್ಯೂ ಕಾರಣದಿಂದ ಮತ್ತೆ ಕತ್ತಲು ಆವರಿಸಿದಂತಾಗಿದೆ.
ಲೋಕಕ್ಕೆ ಬಂದಿರುವ ಈ ಮಾರಕ ಕೊರೂನಾ ಶಾಪವು ತೊಲಗಿ ಮತ್ತೆ ಜೀವನಕ್ಕಾಗಿ ಹರಸಾಹಸ ಪಡುವವವರ ಬದುಕು ಕಂಗೊಳಿಸಲಿ ಎಂಬುವುದೇ ಈ ಲೇಖನದ ಆಶಯವಾಗಿದೆ.
✍️ ಹಸೈನಾರ್ ಜಯನಗರ




