ಬಂಟ್ವಾಳ: ಕಾಡುಕೋಣ ಪ್ರತ್ಯಕ್ಷ: ಆತಂಕದಲ್ಲಿ ವಿದ್ಯಾರ್ಥಿಗಳು ಮತ್ತು ಜನರು
ಬಂಟ್ವಾಳ: ತಾಲೂಕಿನ ವಾಮದಪದವು ಸಮೀಪದ ಅಜ್ಜಿಬೆಟ್ಟು ಗ್ರಾಮದ ಪಚ್ಚೇರು ಪಲ್ಕೆಯ ರಸ್ತೆ ಬದಿಯಲ್ಲಿ ಕಾಡು ಕೋಣ ಪ್ರತ್ಯಕ್ಷಗೊಂಡಿದ್ದು ಸಾರ್ವಜನಿಕರಲ್ಲಿ ಭೀತಿ ಉಂಟಾಗಿದೆ.
ಇಲ್ಲಿ ನಿರಂತರವಾಗಿ ಕಾಡು ಕೋಣಗಳ ಹಾವಳಿ ಹೆಚ್ಚಾಗುತ್ತಿದ್ದು ಎಲ್ಲೆಂದರಲ್ಲಿ ಜನತೆ ಭೀತಿಯಲ್ಲಿ ಜೀವಿಸುವಂತಾಗಿದೆ. ಪುಟ್ಟ ಮಕ್ಕಳು, ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಕಾಡುಕೋಣಗಳ ಭೀತಿಯಲ್ಲೇ ಅಡ್ಡಾಡುವಂತಾಗಿದೆ.
ಕೃಷಿ ಜಮೀನಿನಲ್ಲಿ ಮಹಿಳೆಯರು, ವೃದ್ಧರು ಕೆಲಸ ಮಾಡುತ್ತಿರುವಾಗ ಕಾಡುಕೋಣಗಳು ದಾಳಿ ಇಟ್ಟರೆ ಅಪಾಯ ಖಂಡಿತಾ. ಹಾಡಹಗಲೇ ರಸ್ತೆಯಲ್ಲಿ ಸಾಮಾನ್ಯ ಜಾನುವಾರಿನಂತೆ ಕಾಡು ಕೋಣಗಳು ಓಡಾಡುತ್ತಿದೆ.
ಹಾಡಹಗಲೇ ಕಾಡುಕೋಣ ರಸ್ತೆಯಲ್ಲಿ ಸುತ್ತಾಡುವುದು ನೋಡಿ ಇಲ್ಲಿನ ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗುವ ಜೊತೆಗೆ ಇನ್ನು ಕೃಷಿ ಭೂಮಿಗೂ ಲಗ್ಗೆ ಇಟ್ಟು ಬೆಳೆಗಳನ್ನು ಹಾಳು ಮಾಡುವುದೇ ಎನ್ನುವ ಭೀತಿಯೂ ವ್ಯಕ್ತವಾಗಿದೆ.
ನಾಡಿನೆಲ್ಲೆಡೆ ಇದೀಗ ಚಿರತೆ ಸೇರಿದಂತೆ ಕಾಡುಪ್ರಾಣಿಗಳು ನಗರಗಳಲ್ಲೂ ಕಂಡು ಬರುತ್ತಿರುವುದರ ಬಗ್ಗೆ ಅರಣ್ಯಾಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ.
ಅಜ್ಜಿಬೆಟ್ಟು ಪಚ್ಚೇರು ಪಲ್ಕೆ ರಸ್ತೆ ಪಕ್ಕದಲ್ಲಿ ಕಂಡು ಬರುತ್ತಿರುವ ಕಾಡುಕೋಣಗಳ ಬಗ್ಗೆಯೂ ಅರಣ್ಯಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಅಲ್ಲದೆ ಅರಣ್ಯಾಧಿಕಾರಿಗಳಿಗೆ ದೂರು ನೀಡಲು ಮುಂದಾಗಿದ್ದಾರೆ



