ವಿಟ್ಲ: ಪುಣಚ-ಬಲ್ನಾಡು ಗಡಿ ಭಾಗದಲ್ಲಿ ಚಿರತೆ ಪ್ರತ್ಯಕ್ಷ: ಭಯಭೀತರಾಗಿರುವ ಜನ
ವಿಟ್ಲ: ಪುಣಚ ಗ್ರಾಮ ಮತ್ತು ಪುತ್ತೂರು ತಾಲೂಕಿನ ಗಡಿಭಾಗದಲ್ಲಿರುವ ಚನಿಲ, ಅಂಬಟೆಮೂಲೆ, ಬೈಲುಪದವು, ಕೋಡಂದೂರು ಭಾಗದಲ್ಲಿ ಒಂಟಿ ಚಿರತೆಯೊಂದು ಹಲವು ದಿನಗಳಿಂದ ಅಡ್ಡಾಡಿಕೊಂಡಿದ್ದು, ಈ ಭಾಗದ ಜನರಲ್ಲಿ ಭಯ ಮೂಡಿಸಿದೆ.
ಅರಣ್ಯ ಇಲಾಖೆಯ ಗೇರು ಅಭಿವೃದ್ಧಿ ನಿಗಮದ ಗೇರುಬೀಜ ತೋಪು ಸುಮಾರು ಮೂವತ್ತು ಎಕರೆಗಿಂತಲೂ ಅಧಿಕ ವಿಸ್ತೀರ್ಣದಲ್ಲಿ ಹರಡಿದ್ದು, ಇಲ್ಲಿ ಗೇರುಬೀಜ ಮರಗಳಂದಿಗೆ ಇತರ ಕಾಡು ಜಾತಿಯ ಮರಗಳು, ಪೊದೆಗಂಟಿಗಳು, ಹುಲ್ಲು ಬೆಳೆದಿದ್ದು, ಜನರು ಸಂಚರಿಸುವುದು ಕಡಿಮೆಯಾಗಿರುವ ಕಾರಣ ಹಂದಿ, ಮರಬೆಕ್ಕು, ಕೋತಿ ಇನ್ನಿತರ ಕಾಡುಪ್ರಾಣಿಗಳಿಗೆ ಆಶ್ರಯ ನೀಡುತ್ತಿದೆ.
ಸುಮಾರು ೫೦ ವರ್ಷಗಳ ಹಿಂದೆ ಈ ಭಾಗದಲ್ಲಿ ಹತ್ತಾರು ಹುಲಿಗಳು, ಜಿಂಕೆ, ಕಾಡುಕೋಣಗಳು ಇದ್ದ ಬಗ್ಗೆ ಹಿರಿಯರು ನೆನಪಿಸುತ್ತಾರೆ. ಹಗಲು ವೇಳೆಯೇ ದನಕರುಗಳನ್ನು ಎತ್ತಿಕೊಂಡು ಹೋಗುತ್ತಿದ್ದು, ಜನರು ಹುಲಿಗಳನ್ನು ಹಿಡಿಯಲು ಕಲ್ಲನಿಂದ ಗೂಡು(ಪಂಜರ) ನಿರ್ಮಿಸಿದ್ದ ಎರಡು ಗೂಡುಗಳು ಈಗಲೂ ಇವೆ. ಜನವರಿ ೧ ರಂದು ಹಗಲು ವೇಳೆಯೇ ಕೋಡಂದೂರು ಭಾಗದಲ್ಲಿ ಸೀತಾರಾಮ ನಾಯಕರಿಗೆ ಕಾಣಸಿಕ್ಕಿತ್ತು. ಜ.೨ ರಂದು ರಾತ್ರಿ ಬೈಕ್ನಲ್ಲಿ ಸುಮಾರು ೧೦ ಗಂಟೆಗೆ ಬೈಕ್ನಲ್ಲಿ ಬರುತ್ತಿದ್ದ ನವೀನ್ ರೈ ಎಂಬವರಿಗೆ ಕಾಂಕ್ರೀಟ್ ರಸ್ತೆಯ ಬದಿಯಲ್ಲಿ ಕಾಣ ಸಿಕ್ಕಿದೆ. ಇದೀಗ ಈ ಭಾಗದ ಜನರೆಲ್ಲಾ ಆತಂಕ್ಕೀಡಾಗಿದ್ದು ನಿತ್ಯ ಈ ರಸ್ತೆಯಲ್ಲಿ ನೂರಾರು ಮಂದಿ ಸಂಚರಿಸುತ್ತಿದ್ದಾರೆ. ಅರಣ್ಯ ಇಲಾಖೆ ಚಿರತೆಯನ್ನು ಹಿಡಿದು ದೂರದ ರಕ್ಷಿತಾರಣ್ಯಕ್ಕೆ ಬಿಡುವ ಕಾರ್ಯ ನಡೆಸಬೇಕಾಗಿದೆ.





