ಲಖಿಂಪುರ ಖೇರಿ ಹಿಂಸಾಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಹತ್ಯೆ ಪ್ರಕರಣ: ಇಬ್ಬರ ಬಂಧನ
ಲಖನೌ: ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರದ ವೇಳೆ ಬಿಜೆಪಿ ಕಾರ್ಯಕರ್ತರಿಬ್ಬರನ್ನು ಹತ್ಯೆ ಮಾಡಿದ ಆರೋಪದ ಮೇಲೆ ಮತ್ತಿಬ್ಬರನ್ನು ವಿಶೇಷ ತನಿಖಾ ದಳ (ಎಸ್ಐಟಿ) ಬಂಧಿಸಿದೆ.
ಇದರೊಂದಿಗೆ ಕಾರ್ಯಕರ್ತರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್ಐಆರ್ ಅಡಿಯಲ್ಲಿ, ಈವರೆಗೆ ಒಟ್ಟು ಆರು ಜನರನ್ನು ಬಂಧಿಸಿದಂತಾಗಿದೆ.
ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಭೇಟಿ ವಿರೋಧಿಸಿ ಲಖಿಂಪುರ ಖೇರಿಯಲ್ಲಿ ಕಳೆದ ವರ್ಷ ಅಕ್ಟೋಬರ್ 3ರಂದು ರೈತರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ರೈತರ ಮೇಲೆ ಕಾರು ಚಲಾಯಿಸಿದ್ದರಿಂದ ನಾಲ್ವರು ಮೃತಪಟ್ಟಿದ್ದರು. ಇದರಿಂದ ಉದ್ರಿಕ್ತರಾದ ಜನರ ಗುಂಪು ಬಿಜೆಪಿ ಕಾರ್ಯಕರ್ತರಾದ ಶುಭಂ ಬಾಜ್ಪೈ, ಶ್ಯಾಮ್ ಸುಂದರ್ ನಿಶಾದ್ ಮತ್ತು ಕಾರು ಚಾಲಕ ಹರಿರಾಮ್ ಎನ್ನುವವರ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿತ್ತು.
ಅಂದು ನಡೆದ ಹಿಂಸಾಚಾರದಲ್ಲಿ ಒಬ್ಬ ಪತ್ರಕರ್ತ ಸೇರಿ ಒಟ್ಟು ಎಂಟು ಮಂದಿ ಸಾವಿಗೀಡಾಗಿದ್ದರು.
‘ಎಫ್ಐಆರ್ ಸಂಖ್ಯೆ 220ಕ್ಕೆ ಸಂಬಂಧಿಸಿದಂತೆ, ತಿಕುನಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಖೈರಾತಿಯಾ ಗ್ರಾಮದ ಕವಲ್ಜೀತ್ ಸಿಂಗ್ ಮತ್ತು ಪಾಲಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಬಾಬೌರಾ ಗ್ರಾಮದ ಕಮಲ್ಜೀತ್ ಸಿಂಗ್ ಎನ್ನುವವರನ್ನು ಸದ್ಯ ಬಂಧಿಸಲಾಗಿದೆ’ ಎಂದು ಎಸ್ಐಟಿ ತಿಳಿಸಿದೆ.
ಕೊಲೆ (ಸೆಕ್ಷನ್ 302) ಸೇರಿದಂತೆ ಐಪಿಸಿಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ವಿಚಿತ್ರ ಸಿಂಗ್, ಗುರ್ವಿಂದರ್ ಸಿಂಗ್, ರಂಜಿತ್ ಸಿಂಗ್ ಮತ್ತು ಅವತಾರ್ ಸಿಂಗ್ ಉಳಿದ ನಾಲ್ವರು ಬಂಧಿತರು. ಎಲ್ಲರೂ ಈಗ ಜೈಲಿನಲ್ಲಿದ್ದಾರೆ.
ರೈತರ ಮೇಲೆ ಕಾರು ಚಲಾಯಿಸಿ ಹತ್ಯೆಗೈದ ಪ್ರಕರಣದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಮಗ ಆಶಿಶ್ ಮಿಶ್ರಾ ಅವರನ್ನು ಬಂಧಿಸಲಾಗಿದೆ.




