February 3, 2026

ಉಡುಪಿಯ ಸರಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನಲ್ಲಿ ಹಿಜಾಬ್ ನಿಷೇಧ: ಭಾರತದ ಪರಮಶ್ರೇಷ್ಠ ಸಂವಿಧಾನದ ಧಾರ್ಮಿಕ ಸಹಿಷ್ಣುತೆ ಮತ್ತು ಸಾಮರಸ್ಯಗಳ ಸಿದ್ಧಾಂತಕ್ಕೆ ವಿರುದ್ಧ- ಡಾ. ಝೈನಿ ಕಾಮಿಲ್

0
IMG-20220102-WA0036

ಉಡುಪಿ : ಉಡುಪಿಯ ಸರಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನಲ್ಲಿ ಮುಸ್ಲಿಂ ಹೆಣ್ಮಕ್ಕಳು ತಲೆ ಮುಚ್ಚುವ ಬಟ್ಟೆ (ಹಿಜಾಬ್) ಧರಿಸಿ ತರಗತಿಗೆ ಹಾಜರಾಗುವುದನ್ನು‌ ನಿರಾಕರಿಸುವ ಆಡಳಿತ ಮಂಡಳಿಯ ನಿರ್ಣಯವು ಭಾರತದ ಪರಮ ಶ್ರೇಷ್ಠ ಸಂವಿಧಾನದ ಧಾರ್ಮಿಕ ಸಹಿಷ್ಣುತೆ ಮತ್ತು ಸಾಮರಸ್ಯಗಳ ಬಹುತ್ವ ಸಿಧ್ದಾಂತಕ್ಕೆ ವಿರುದ್ದವಾದದ್ದು. ಈ ನಿರ್ಣಯದಿಂದ ಕಾಲೇಜು ಆಡಳಿತ ಮಂಡಳಿಯು ಹಿಂದೆ ಸರಿದು ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರಿಗೆ ನ್ಯಾಯ ಒದಗಿಸಬೇಕೆಂದು ಸುನ್ನೀ ಯುವಜನ ಸಂಘ (ಎಸ್.ವೈ.ಎಸ್.) ಕರ್ನಾಟಕ ರಾಜ್ಯಾಧ್ಯಕ್ಷ ಡಾ. ಎಮ್ಮೆಸ್ಸೆಂ. ಝೈನೀ ಕಾಮಿಲ್ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

ಕಾಲೇಜಿನ ಇತರ ಎಲ್ಲಾ ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸುವುದರ ಜತೆ ತಮಗೆ ಕಡ್ಡಾಯವಾದ ಧಾರ್ಮಿಕ ಹಕ್ಕೊಂದರ ನಿರ್ವಹಣೆಯ ಅವಕಾಶಕ್ಕಾಗಿ ಮುಸ್ಲಿಂ ವಿದ್ಯಾರ್ಥಿನಿಯರು ಬೇಡಿಕೆ ಇಟ್ಟಿದ್ದಾರೆ. ಇದು ನ್ಯಾಯವಾದುದು. ಅನೇಕತೆಗಳಲ್ಲಿ‌ ಏಕತೆಯನ್ನು ಸಾರುವ ನಮ್ಮ ದೇಶದಲ್ಲಿ, ಸರಕಾರಿ ವಿದ್ಯಾ ಸಂಸ್ಥೆಯೊಂದು ಇಂತಹ ನಿರ್ಣಯ ಕೈಗೊಳ್ಳುವುದು ಮತ್ತು ಅದಕ್ಕೆ ಒಬ್ಬ ಶಾಸಕ ನಾಯಕತ್ವ ಕೊಡುವುದು ಕಳವಳಕಾರಿ ಸಂಗತಿ.

ಮುಸ್ಲಿಂ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಯಿಂದ ದೂರವಿಟ್ಟು ಅವರಲ್ಲಿ ಭಯ ಮತ್ತು ಕೀಳರಿಮೆಯನ್ನು ಸೃಷ್ಟಿಸುವ ಹುನ್ನಾರ ಇದರಲ್ಲಿ ಅಡಗಿರುವ ಬಗ್ಗೆ ಸಂದೇಹ ಬರುತ್ತಿದೆ.
ಕೆಲವು ಖಾಸಗಿ ವಿದ್ಯಾ ಸಂಸ್ಥೆಗಳು ಇಂತಹ ತೀರ್ಮಾನಗಳನ್ನು ಕೈಗೊಂಡು ಗೊಂದಲ ಉಂಟುಮಾಡುತ್ತಿರುತ್ತವೆ. ಆದರೆ ಇದೀಗ ಸರಕಾರಿ ಕಾಲೇಜಿನಲ್ಲಿ ಈ ರೀತಿಯ ಧಾರ್ಮಿಕ ತಾರತಮ್ಯ ನಡೆಯುವ ಬಗ್ಗೆ ನಾಗರಿಕ ಸಮಾಜ ಎಚ್ಚೆತ್ತು ಪ್ರತಿಭಟಿಸಬೇಕಿದೆ.

ಈ ಕುರಿತು ಆಡಳಿತ ಮಂಡಳಿಯು ತಮ್ಮ ನಿರ್ಣಯ ಪುನರ್ ವಿಮರ್ಶೆ ಮಾಡಬೇಕೆಂದು ಡಾ. ಝೈನೀ ಕಾಮಿಲ್ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!