ವಿಟ್ಲ: ಗಣೇಶೋತ್ಸವ ಹಿನ್ನೆಲೆ: ವಿಟ್ಲ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ: ರಾತ್ರಿ 10 ಗಂಟೆ ಬಳಿಕ ಧ್ವನಿವರ್ಧಕ ಬಳಕೆ ನಿಷೇಧ: ಪೊಲೀಸ್ ನಿರೀಕ್ಷಕ ಪ್ರಕಾಶ್ ದೇವಾಡಿಗ
ವಿಟ್ಲ: ಯಾರಿಗೂ ತೊಂದರೆ ಯಾಗದ ರೀತಿಯಲ್ಲಿ ಗಣೇಶೋತ್ಸವ ಆಚರಣೆ ನಡೆಯಬೇಕು. ಸಾರ್ವಜನಿಕರಿಂದ ಹಾಗೂ ವಾಹನ ಮಾಲೀಕರಿಂದ ಬಲವಂತವಾಗಿ ಚಂದಾ/ದೇಣಿಗೆ ಸಂಗ್ರಹಿಸಬಾರದು. ಧ್ವನಿವರ್ಧಕ ಬಳಕೆ ರಾತ್ರಿ 10 ಗಂಟೆಯಿಂದ ಮರುದಿನ ಬೆಳಿಗ್ಗೆ 6 ಗಂಟೆಯವರೆಗೆ ನಿರ್ಬಂಧಿಸಲಾಗಿದೆ ಎಂದು ವಿಟ್ಲ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕ ಪ್ರಕಾಶ್ ದೇವಾಡಿಗ ಹೇಳಿದರು.
ವಿಟ್ಲ ಪೊಲೀಸ್ ಠಾಣೆಯ ಸಂಭಾಂಗಣದಲ್ಲಿ ಗಣೇಶೋತ್ಸವ ಅಂಗವಾಗಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದರು.
ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಸ್ಥಳೀಯಾಡಳಿತ, ಕೆಪಿಟಿಸಿಎಲ್, ಅಗ್ನಿಶಾಮಕ ಇಲಾಖೆ ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳಿಂದ ಪೂರ್ವಾನುಮತಿ ಪಡೆಯಬೇಕು. ಗಣೇಶ ಮೂರ್ತಿಗಳ ವಿಸರ್ಜನೆಯ ದಿನಾಂಕ ಹಾಗೂ ಸಾರ್ವಜನಿಕ ಮೆರವಣಿಗೆ ಆಯೋಜಿಸುವ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡಬೇಕು. ವಿಸರ್ಜನೆಯ ಸಂದರ್ಭ ಈಜು ಗೊತ್ತಿದ್ದವರು ಮಾತ್ರ ನೀರಿಗೆ ಇಳಿಯಬೇಕು. ಯಾವುದೇ ಆಕಸ್ಮಿಕ ಘಟನೆಗಳು ಸಂಭವಿಸದಂತೆ ಆಯೋಜಕರು ಮತ್ತು ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡಬೇಕು.
ಮಧ್ಯಪಾನ ಮಾಡಿ ಬರುವವರಿಂದ ಸಾರ್ವಜನಿಕರಿಗೆ ತೊಂದರೆ ಮಾಡದಂತೆ ಸೂಕ್ತ ಗಮನ ಹರಿಸಬೇಕು. ಡಿಜೆಗಳಿಗೆ ಯಾವುದೇ ಕಾರಣಕ್ಕೂ ಅನುಮತಿಯಿಲ್ಲ. ಕಾರ್ಯಕ್ರಮಗಳನ್ನೂ ನಿಗದಿತ ಸಮಯಕ್ಕೆ ಮುಗಿಸುವ ನಿಟ್ಟಿನಲ್ಲಿ ಹೆಚ್ಚಿನ ಒತ್ತು ನೀಡಬೇಕು. ಪ್ರಚೋದನಾಕಾರಿ ಭಾಷಣ, ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಇಲಾಖೆ ನಿಗಾ ಇಡಲಿದೆ ಎಂದರು.
ಪೊಲೀಸ್ ಉಪ ನಿರೀಕ್ಷಕ ರಾಮಕೃಷ್ಣ ಉಪಸ್ಥಿತರಿದ್ದರು.





