July 30, 2026

ಮಂಗಳೂರು-ಮೂಡುಬಿದಿರೆ ಹೆದ್ದಾರಿಯ ಎಡಪದವು ಬಳಿ ಹೊಸತಾಗಿ ನಿರ್ಮಿಸಿರುವ ಹೆದ್ದಾರಿ ಕುಸಿತ-ಸಂಪರ್ಕ ಕುಸಿತ

0
image_editor_output_image-766852916-1785408957544

ಮಂಗಳೂರು:  ಮಂಗಳೂರು-ಮೂಡುಬಿದಿರೆ ಹೆದ್ದಾರಿಯ ಎಡಪದವು ಬಳಿ ಹೊಸತಾಗಿ ನಿರ್ಮಿಸಿರುವ ಹೆದ್ದಾರಿ ಕಳೆದ ಕೆಲವು ದಿನದ ಮಳೆಯಿಂದಾಗಿ ಭಾಗಶಃ ಕುಸಿತಗೊಂಡಿದೆ. ಅಡಿಕೆ ತೋಟವಿದ್ದ ಜಾಗಕ್ಕೆ 35 ಮೀಟರ್ ಮಣ್ಣು ಸುರಿದು ಮಾಡಿದ್ದ ಹೆದ್ದಾರಿ ಕಳಪೆ ಕಾಮಗಾರಿಯಿಂದ ಕುಸಿದು ಹೋಗಿದೆ.

ಇದೇ ವೇಳೆ, ಮಂಗಳೂರಿನಿಂದ ಎಡಪದವು ಪೇಟೆಯ ಮೂಲಕ ಮೂಡುಬಿದಿರೆ ಹೋಗುವ ಪರ್ಯಾಯ ರಸ್ತೆಯ ಮೇಲ್ಬಾಗದ ಗುಡ್ಡವೂ ಕುಸಿಯುವ ಭೀತಿ ಎದುರಾಗಿದ್ದು ಇದರಿಂದಾಗಿ ಮೂಡುಬಿದಿರೆ ಮಂಗಳೂರು ಹೆದ್ದಾರಿಯೇ ಸಂಚಾರ ಸ್ಥಗಿತದ ಆತಂಕದಲ್ಲಿದೆ. ತಿಂಗಳ ಹಿಂದೆಯೇ ಮೊದಲ ಮಳೆಗೆ ಎಡಪದವು ಮುಚ್ಚೂರು ಕ್ರಾಸ್ ಬಲಭಾಗದಲ್ಲಿ ಗುಡ್ಡ ಕುಸಿದು ಆತಂಕಕ್ಕೆ ಕಾರಣವಾಗಿತ್ತು. ಈಗ ಅಲ್ಲಿಯೇ ತುಸು ಮುಂದೆ ಶಿಬಿಕೆರೆ ಭಾಗದಲ್ಲಿ ಎಡಪದವು ಬೈಪಾಸ್ ಮಾಡಲು ನಿರ್ಮಿಸಿರುವ ಚತುಷ್ಪಥ ಹೆದ್ದಾರಿಯು ಭಾಗಶಃ ಕುಸಿತಗೊಂಡಿದ್ದು, ಸಂಚಾರಕ್ಕೆ ತೊಂದರೆಯಾಗಿದೆ.

ಕುಲಶೇಖರ-ಸಾಣೂರು ರಾಷ್ಟ್ರೀಯ ಹೆದ್ದಾರಿ 169ರ ಈ ಭಾಗವು ಕೆಲವು ದಿನ ಗಳಿಂದ ತೀವ್ರಗೊಂಡಿರುವ ಮಳೆಯಿಂದಾಗಿ ಅರ್ಧಕ್ಕೆ ಕುಸಿತದಿದೆ. ನೀರು ಹರಿಯುವ ಹಾಗೂ ಅಡಿಕೆ, ತೆಂಗಿನ ತೋಟವಿದ್ದ ಜಾಗಕ್ಕೆ ಇನ್ನೊಂದು ಬದಿಯ ಗುಡ್ಡದಿಂದ ಟನ್ ಗಟ್ಟಲೆ ಮಣ್ಣು ಸುರಿದು ಸುಮಾರು 35 ಅಡಿಗಳಷ್ಟು ಎತ್ತರಕ್ಕೇರಿಸಿ ಈ ರಸ್ತೆ ನಿರ್ಮಿಸಲಾಗಿತ್ತು. ಗುಡ್ಡದ ಒಂದು ಬದಿಯಿಂದ ನೀರು ಹರಿದು ಹೋಗುತ್ತಿದ್ದ ಜಾಗವಾಗಿದ್ದು ಇಲ್ಲಿ 35 ಅಡಿಯಷ್ಟು ಎತ್ತರಕ್ಕೆ ಮಣ್ಣು ತುಂಬಿದ್ದು ತಳಭಾಗದಲ್ಲಿ ಸಣ್ಣ ಚರಂಡಿ ನಿರ್ಮಿಸಲಾಗಿದೆ. ಆದರೆ ಭಾರೀ ಮಳೆ, ಪ್ರವಾಹದಿಂದ  ಚರಂಡಿ ಮತ್ತು ಅಡಿಕೆ ತೋಟದಲ್ಲಿ ಮಳೆ ನೀರು ತುಂಬಿದ್ದು ಬ್ಲಾಕ್ ಆಗಿದೆ. ಇದರಿಂದಾಗಿ ಹೆದ್ದಾರಿಗೆ ತುಂಬಿರುವ ಮಣ್ಣು ಸಹಿತ ರಸ್ತೆ ಕುಸಿದು ಹೋಗಿದೆ. ಈ ಭಾಗದಲ್ಲಿ ಹೊಸ ರಸ್ತೆ ಇದೇ ಮಳೆಗಾಲದಲ್ಲಿ ಕುಸಿದು ಹೋಗುವ ಸಾಧ್ಯತೆ ಇದೆಯೆಂದು ಹೆಡ್ ಲೈನ್ ಕರ್ನಾಟಕ ತಿಂಗಳ ಹಿಂದೆಯೇ ವರದಿ ಮಾಡಿತ್ತು.

“ಕಳೆದ ವರ್ಷ ಮಾರ್ಚ್‌ನಲ್ಲಿ ಡಿಸಿ, ಎನ್‌ಎಚ್‌ಎಐಗೆ ಮನವಿ ಕೊಟ್ಟಿದೆವು. ಒಂದು ಭಾಗ ಗುಡ್ಡ ಗುಡ್ಡ ಇದ್ದು, 35 ಅಡಿ ಎತ್ತರದ ಹೆದ್ದಾರಿ ಮಾಡಿರುವ ಕಾರಣ ಮಳೆ ನೀರು ನಿಂತು ಕುಸಿಯಬಹುದು ಎನ್ನುವ ಬಗ್ಗೆ ದೂರು ಕೊಟ್ಟಿದ್ದವು. ಆದರೆ ಅಧಿಕಾರಿಗಳು ಗಮನ ಕೊಡಲಿಲ್ಲ. ನಮಗೆ ಸರಿಯಾದ ಚರಂಡಿ ವ್ಯವಸ್ಥೆ ಮತ್ತು ಸರ್ವಿಸ್ ರಸ್ತೆ, ಅಂಡರ್ ಪಾಸ್‌ ಕೇಳಿದ್ದೆವು. ಏನೂ ಮಾಡಿಕೊಡಲಿಲ್ಲ, ಈಗ ಅನುಭವಿಸಬೇಕಾದ ಸ್ಥಿತಿ ಬಂದಿದೆ ಎಂದು ಸ್ಥಳೀಯರು ಅಳಲು ಹೇಳಿಕೊಂಡಿದ್ದಾರೆ.

ಅವೈಜ್ಞಾನಿಕ ಕಾಮಗಾರಿಯಿಂದಾಗಿ ಅಡಿಕ, ತೆಂಗಿನ ಮರ ಇರುವ ನಾಲ್ಕು ಎಕ್ರೆ ತೋಟದಲ್ಲಿ 2-3 ಅಡಿ ನೀರು ನಿಂತಿದೆ. ಒಂದು ತಿಂಗಳಿನಿಂದ ನೀರು ಹರಿದು ಹೋಗದೆ ಇದೇ ರೀತಿ ನಿಂತ ಕಾರಣ ಮರಗಳೇ ಕೊಳೆತು ಹೋಗುವ ಭೀತಿ ಇದೆ ಎಂದು ಸ್ಥಳೀಯರಾದ ಜಾನ್ ಡಿ’ಸೋಜಾ ಹಾಗೂ ಸುದರ್ಶನ್ ಅವರು ಅಳಲು ತೋಡಿಕೊಂಡಿದ್ದಾರೆ. ಮುಚ್ಚೂರು ಹೋಗುವ ರಸ್ತೆಯ ಮೇಲ್ಬಾಗದಲ್ಲಿ ಜೆಸಿಬಿ ಮೂಲಕ ಮಣ್ಣು, ಬಂಡೆ ತೆರವು ಮಾಡುವ ಕೆಲಸ ನಡೆದಿದೆ. ಆದರೆ ಮಳೆ ಇನ್ನೂ ಹೆಚ್ಚಾಗಿ ನೀರು ಹೆಚ್ಚಿನ ಪ್ರಮಾಣದಲ್ಲಿ ಬಂದರೆ ಇಡೀ ರಸ್ತೆಯೇ ಕೊಚ್ಚಿಕೊಂಡು ಹೋಗಿ ಎಡಪದವು ಗ್ರಾಮದ ತೋಟಕ್ಕೆ ನುಗ್ಗುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

error: Content is protected !!