ಅಳಿಕೆ ಶ್ರೀ ಸತ್ಯಸಾಯಿಲೋಕ ಸೇವಾ ಪಿ.ಯು ಕಾಲೇಜಿನಲ್ಲಿ ವಿದ್ಯಾಗಣಪತಿ ಮಹೋತ್ಸವದ ಎರಡನೇ ದಿನದ ಕಾರ್ಯಕ್ರಮ:ಕಣ್ಣಿಗೆ ಕಾಣುವುದರಾಚೆಗೆ ಕಾಣಲು ಸಾಧ್ಯವಾದರೆ ಆ ಚಿಂತನೆ ಹೊಸ ಆಯಾಮವನ್ನು ಕೊಡುವುದು: ಡಾ. ಕೆ. ಚಿನ್ನಪ್ಪಗೌಡ
ವಿಟ್ಲ:
ಈಗಿನ ಕಾಲದಲ್ಲಿ ನಡೆಯುವ ಸಮಸ್ಯೆಗಳಿಗೆ ಅವಿವೇವಕವೇ ಕಾರಣ; ಶಿಕ್ಷಣ ಹಾಗೂ ಆರೋಗ್ಯ ಎಲ್ಲರಿಗೂ ಸಿಗುವಂತಾಗಬೇಕು ಎಂದು ಕರ್ನಾಟಕ ಜನಪದ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿಯಾದ ಡಾ. ಕೆ. ಚಿನ್ನಪ್ಪಗೌಡರು ಉಪದೇಶಿಸಿದರು.
ಅಳಿಕೆ ಶ್ರೀ ಸತ್ಯಸಾಯಿಲೋಕ ಸೇವಾ ಪಿ.ಯು ಕಾಲೇಜಿನ ಪ್ರಾರ್ಥನಾ ಮಂದಿರದಲ್ಲಿ ನಡೆದ ವಿದ್ಯಾಗಣಪತಿ ಮಹೋತ್ಸವದ ಎರಡನೇ ದಿನದ ಅಪರಾಹ್ನದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಸೂರ್ಯ ಪಿ. ಭಟ್ ಹಾಗೂ ಸಾತ್ವಿಕ್ ಗಡಗೆ ಗಣೇಶೋತ್ಸವದ ಮಹತ್ವದ ಬಗ್ಗೆ ತಿಳಿಸಿದರು. ದೇವಾಂಶು ಕಾರಂತ್ ಹಾಡನ್ನು ಹಾಡಿ ರಂಜಿಸಿದರು.
ಕಾರ್ಯಕ್ರಮದ ಇನ್ನೋರ್ವ ಮುಖ್ಯ ಅತಿಥಿ ಹೊನ್ನಾವರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಯೋಗೀಶ್ ಸಿ.ಕೆ. IFS ಅವರು ಮಾತಾಡುತ್ತಾ ಚಾರಿತ್ರ್ಯವೆಂದರೆ ಶೂನ್ಯದ ಎದುರಿರುವ ಒಂದಂಕಿಯಂತೆ, ಚಾರಿತ್ರ್ಯವೆಂಬ ಒಂದು ಎನ್ನುವ ಅಂಕೆಯಿಲ್ಲದಿದ್ದರೆ ಎಷ್ಟೂ ಶೂನ್ಯ ಬರೆದರೂ ಪ್ರಯೋಜನವಿರದು ಎಂದರು. ಪ್ರಕೃತಿಯಲ್ಲಿ ಮಾನವ ತಾನು ಮಧ್ಯದ ಬಿಂದೆಂದು ಗ್ರಹಿಸಿ ಹಲವು ಸಮಸ್ಯೆಗಳನ್ನು ಆಹ್ವಾನಿಸುತ್ತಿದ್ದಾನೆ. ಅಲ್ಲದೆ, ಗಾಂಧೀಜಿಯ ಏಳು ಸಾಮಾಜಿಕ ಪಿಡುಗುಗಳ ಬಗ್ಗೆ ವಿವರಿಸುತ್ತಾ ಜ್ಞಾನ, ಭಕ್ತಿ ಹಾಗೂ ಕರ್ಮ ಮಾರ್ಗಗಳ ಮೂಲಕ ಶಿಕ್ಷಣ ಸಿಗುತ್ತಿರುವುದು ಸತ್ಯಸಾಯಿ ಸಂಸ್ಥೆಗಳಲ್ಲಿ ಮಾತ್ರ ಎಂದು ಹರ್ಷ ವ್ಯಕ್ತಪಡಿಸಿದರು. ಟ್ರಸ್ಟಿನ ಕಾರ್ಯದರ್ಶಿಯೂ, ಶೈಕ್ಷಣಿಕ ಸಂಸ್ಥೆಗಳ ಸಂಚಾಲಕರೂ ಆದ ಎಸ್. ಚಂದ್ರಶೇಖರ ಭಟ್ ಜೀವನದಲ್ಲಿ ಪರಿಶ್ರಮದಿಂದ ಎಷ್ಟೆತ್ತರಕ್ಕೂ ಏರಬಹುದೆಂದು ಸಲಹೆಯಿನ್ನಿತ್ತರು. ವಿದ್ಯಾಕೇಂದ್ರದ ಪ್ರಾಂಶುಪಾಲರಾದ ಶಿವಕುಮಾರ ಎಂ. ಸ್ವಾಗತಿಸಿ, ಶಿಕ್ಷಕ ಸುನಿಲ್ ಅವರು ವಂದಿಸಿದರು. ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪ್ರೌಢಶಾಲಾ ಶಿಕ್ಷಕ ಅಶೋಕ ಕುಮಾರ್ ಎ. ನಿರೂಪಿಸಿದರು.





