July 3, 2026

ಮಂಗಳೂರಿನ ಕೋಡಿಯಾಲ್‌ನಲ್ಲಿರುವ ಜೈಲಿನೊಳಗೆ ಗಾಂಜಾ ಎಸೆದ ಆರೋಪಿಯ ಬಂಧನ

0
image_editor_output_image-707032396-1783058302560

ಮಂಗಳೂರು : ಮಂಗಳೂರಿನ ಕೋಡಿಯಾಲ್‌ನಲ್ಲಿರುವ ಜೈಲಿನೊಳಗೆ ಗಾಂಜಾ ಎಸೆದ ಆರೋಪಿಯನ್ನು ಕೆಎಸ್‌ಐಎಸ್‌ಎಫ್ ಸಿಬ್ಬಂದಿ ಬೆನ್ನಟ್ಟಿ ಹಿಡಿದ ಘಟನೆ ನಡೆದಿದೆ.

ಆರೋಪಿ ಮೂಲತಃ ಬಂಟ್ವಾಳ ಕೊಳತ್ತಮಜಲು ಕೋಳಕೇರಿಯ ಪ್ರಸ್ತುತ ಉರ್ವದಲ್ಲಿ ವಾಸವಾಗಿರುವ ತಿಲಕ್‌ರಾಜ್ ಎಂದು ತಿಳಿದು ಬಂದಿದ್ದು, ಗುರುವಾರ ಮುಂಜಾನೆ ಸುಮಾರು 4:20ರ ವೇಳೆಗೆ ಕಾರಾಗೃಹದ ಒಳಗಿರುವ ಅಡುಗೆ ಮನೆಗೆ ಅನುಮಾನಾಸ್ಪದ ವಸ್ತುವನ್ನು ಅಪರಿಚಿತ ವ್ಯಕ್ತಿಯೊಬ್ಬ ಎಸೆದಿರುವುದನ್ನು ಕರ್ತವ್ಯನಿರತ ಕೆಎಸ್‌ಐಎಸ್‌ಎಫ್ ಆರ್‌ಪಿಸಿ ಕಿರಣ್ ಗಮನಿಸಿದ್ದು, ತಕ್ಷಣ ಬೆನ್ನಟ್ಟಿ ಆತನನ್ನು ಹಿಡಿದು ವಿಚಾರಿಸಿದ್ದಾರೆ.

ಈ ವೇಳೆ ಮೂಡುಶೆಡ್ಡೆ ನಿವಾಸಿಯೊಬ್ಬ ಗಾಂಜಾ, ಲೈಟರ್, ಗಾಂಜಾ ಸೇದುವ ಪೇಪರ್‌ಗಳನ್ನು ಕೊಟ್ಟು ಈ ವಸ್ತುಗಳನ್ನು ಕಾರಾಗೃಹದ ಒಳಗೆ ಎಸೆಯಬೇಕು ಎಂದು ಹೇಳಿ ಈ ಕೃತ್ಯ ಎಸಗಲು 2 ಸಾವಿರ ರೂಪಾಯಿ ಕೊಟ್ಟಿದ್ದಾನೆ. ಅಲ್ಲದೆ ಕಾರಾಗೃಹದಲ್ಲಿ ಬಂಧಿಯಾಗಿರುವ ಲಾಯ್ ವೇಗಸ್ ಎಂಬಾತನ ಮೊಬೈಲ್ ನಂಬರ್ ನೀಡಿದ್ದು, ಆತನ ಸೂಚನೆಯಂತೆ ಆತ ಹೇಳಿದ ಜಾಗಕ್ಕೆ ಪೊಟ್ಟಣ ಎಸೆದಿರುವುದಾಗಿ ಆರೋಪಿ ಬಾಯ್ಬಿಟ್ಟಿದ್ದಾನೆ.

ಇನ್ನು ಆರೋಪಿಗಳಾದ ತಿಲಕ್‌ರಾಜ್ ಮತ್ತು ಲಾಯ್ ವೇಗಸ್ ವಿರುದ್ಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಮತ್ತು ಕರ್ನಾಟಕ ಕಾರಾಗೃಹಗಳ ತಿದ್ದುಪಡಿ-2022 ಕಾಯಿದೆ 42ರಡಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!