ವಿಟ್ಲ: ಓಮ್ನಿ ಕಾರು ಮತ್ತು ಜೀಪು ನಡುವೆ ಅಪಘಾತ: ಹಲವರಿಗೆ ಗಾಯ
ವಿಟ್ಲ: ಕಡೂರು-ಕಾಂಞಂಗಾಡ್ ಅಂತರಾಜ್ಯ ಹೆದ್ದಾರಿಯ ವಿಟ್ಲ-ಅಡ್ಯನಡ್ಕ ನಡುವಿನ ಪಡಿಬಾಗಿಲು ಮೈರ ತಿರುವಿನಲ್ಲಿ ಜೀಪ್ ಹಾಗೂ ಒಮ್ನಿ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಎರಡೂ ವಾಹನಗಳು ಜಖಂಗೊಂಡಿದ್ದರೂ, ಅದೃಷ್ಟವಶಾತ್ ಎಲ್ಲ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾಸರಗೋಡು ನಗರದ ನಾಗರಕಟ್ಟೆ ನಿವಾಸಿಗಳಾದ ಚಾಲಕ ಕೃಷ್ಣ, ಪ್ರಕಾಶ್, ಸುಜಾತ, ಸುಮಂಗಳ ಮತ್ತು ಶರಣ್ಯ ಸೇರಿದಂತೆ ಒಟ್ಟು 5 ಜನರು ಉಪ್ಪಿನಂಗಡಿಯಲ್ಲಿ ನಡೆಯುತ್ತಿದ್ದ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆ ಓಮ್ನಿಯಲ್ಲಿ ತೆರಳುತ್ತಿದ್ದರು.
ಸುಳ್ಯದ ಉದಯನಾರಾಯಣ ಭಟ್ ಅವರು ಜೀಪಿನಲ್ಲಿ ಬಾಯಾರು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ಮದುವೆಗೆ ಜೀಪಿನಲ್ಲಿ ಓರ್ವರೇ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಡಿಕ್ಕಿಯ ರಭಸ ಎಷ್ಟಿತ್ತೆಂದರೆ ಒಮ್ನಿ ಗಾಡಿ ಸಂಪೂರ್ಣ ಅಪ್ಪಚ್ಚಿಯಾಗಿದೆ. ವಾಹನವು ಇನ್ನು ಸ್ವಲ್ಪ ಬದಿಗೆ ಹೋಗಿದ್ದರೆ ಪಕ್ಕದಲ್ಲೇ ಇದ್ದ ಆಳವಾದ ಗುಂಡಿಗೆ ಬೀಳುವ ಅಪಾಯವಿತ್ತು. ಅಪಘಾತದ ತೀವ್ರತೆಗೆ ಒಮ್ನಿಯ ಬಾಗಿಲು ತೆರೆದುಕೊಂಡು, ಹಿಂಭಾಗದ ಸೀಟಿನಲ್ಲಿ ಕುಳಿತಿದ್ದ ಶರಣ್ಯ ಅವರು ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಇತ್ತ ಅಪಘಾತ ನಡೆದ ತಕ್ಷಣ ಜೀಪು ಚಾಲಕ ಉದಯನಾರಾಯಣ ಭಟ್ ಅವರು ವಾಹನದಿಂದ ಇಳಿಯಲು ಯತ್ನಿಸಿದಾಗ ಆಯತಪ್ಪಿ ಕೆಳಗೆ ಬಿದ್ದಿದ್ದು, ಗಾಯಗೊಂಡಿದ್ದಾರೆ.
ಸ್ಥಳಕ್ಕೆ ತಕ್ಷಣವೇ ಧಾವಿಸಿದ ಸಾರ್ವಜನಿಕರು ಹಾಗೂ ವಿಟ್ಲ ಪೊಲೀಸರು ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ. ರಸ್ತೆಗೆ ಅಡ್ಡಲಾಗಿ ನಿಂತಿದ್ದ ಜೀಪನ್ನು ಪಕ್ಕಕ್ಕೆ ಸರಿಸಿ ಸಂಚಾರವನ್ನು ಸುಗಮಗೊಳಿಸಲಾಗಿದೆ. ಗಾಯಾಳುಗಳನ್ನು ತಕ್ಷಣವೇ ವಿಟ್ಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕೆಲವರನ್ನು ಪುತ್ತೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.




