ಉಡುಪಿ: ಯುವತಿಯ ತಲೆಗೆ ಕಾಂಕ್ರೀಟ್ ಕಲ್ಲಿನಿಂದ ಜಜ್ಜಿ ಚಿನ್ನಾಭರಣ ದರೋಡೆ: ಆರೋಪಿ ಮಹಿಳೆಯ ಬಂಧನ
ಉಡುಪಿ: ಹಣಕಾಸಿನ ತೊಂದರೆಯಿಂದ ಪಕ್ಕದ ರೂಮಿನಲ್ಲಿದ್ದ ಯುವತಿಯ ತಲೆಗೆ ಕಾಂಕ್ರೀಟ್ ಕಲ್ಲಿನಿಂದ ಜಜ್ಜಿ ಕೊಲೆಗೆ ಯ್ನಿಸಿ ಚಿನ್ನಾಭರಣ ದೋಚಿದ್ದ ಆರೋಪಿತೆಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಆರೋಪಿತೆಯನ್ನು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಬಾವಿಕೇರಿ ಗ್ರಾಮದ ಕೇಣಿ ಪೋಸ್ಟ್ ನಿವಾಸಿ ಸುಷ್ಮಾ ಅಣ್ಣಪ್ಪ ನಾಯಕ್ (31) ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ದೂರುದಾರೆ ಮೇಘಾ ಗೌಡ ತನ್ನ ಸ್ನೇಹಿತರಾದ ನಾಗರತ್ನ, ಗಗನ ಮತ್ತು ಯೋಗಿತಾ ಅವರೊಂದಿಗೆ ಶಾಂತಿನಗರದ ಬಾಡಿಗೆ ಕೋಣೆಯಲ್ಲಿ ವಾಸಿಸುತ್ತಿದ್ದರು.
ಮೇ 12 ರಂದು, ಮೇಘಾ ಗೌಡ, ನಾಗರತ್ನ ಮತ್ತು ಗಗನ ಮಣಿಪಾಲದ ಕೈಗಾರಿಕಾ ಪ್ರದೇಶದಲ್ಲಿ ರಾತ್ರಿ ಪಾಳಿ ಬೈಂಡಿಂಗ್ ಕೆಲಸಕ್ಕೆ ಹೋಗಿದ್ದರು. ಕೆಲಸ ಮುಗಿಸಿದ ನಂತರ, ಮೂವರು ಮೇ 13 ರಂದು ಬೆಳಿಗ್ಗೆ 7:15 ರ ಸುಮಾರಿಗೆ ತಮ್ಮ ಕೋಣೆಗೆ ಹಿಂತಿರುಗಿದಾಗ ಕೋಣೆಯ ಬಾಗಿಲು ಭಾಗಶಃ ತೆರೆದಿತ್ತು. ಕೋಣೆಗೆ ಪ್ರವೇಶಿಸಿದಾಗ, ಯೋಗಿತಾ ತಲೆಗೆ ತೀವ್ರ ಗಾಯಗಳಾಗಿ ಮತ್ತು ತಲೆಯಿಂದ ರಕ್ತದ ಮಡುವಿನಲ್ಲಿ ಬಿದ್ದಿದ್ದಳು.
ಆಕೆಯ ಚಿನ್ನದ ಸರವೂ ಕಾಣೆಯಾಗಿತ್ತು. ಗಾಯಗೊಂಡ ಯುವತಿ ಯನ್ನು ತಕ್ಷಣ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಮೇಘಾ ಗೌಡ ನೀಡಿದ ದೂರಿನ ಆಧಾರದ ಮೇಲೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





