ಮಂಗಳೂರು: ಮೇ 25ರವರೆಗೆ ಕರಾವಳಿಯ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ
ಮಂಗಳೂರು: ಅರಬ್ಬಿ ಸಮುದ್ರದಲ್ಲಿ ಭಾರಿ ಬಿರುಗಾಳಿ ಸಹಿತ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇರುವುದರಿಂದ ಮೇ 20 ರಿಂದ ಮೇ 25 ರವರೆಗೆ ಕರ್ನಾಟಕ ಕರಾವಳಿಯ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಭಾರತೀಯ ಹವಾಮಾನ ಇಲಾಖೆ ಮತ್ತು ಕೇಂದ್ರ ಗೃಹ ಸಚಿವಾಲಯದ ತುರ್ತು ಪ್ರತಿಕ್ರಿಯೆ ನಿಯಂತ್ರಣ ಕೊಠಡಿ (ಐಸಿಆರ್-ಇಆರ್) ಎಚ್ಚರಿಕೆ ನೀಡಿದೆ.
ಮೇ 20 ರಿಂದ ಮೇ 22 ರವರೆಗೆ, ಕರ್ನಾಟಕ ಮತ್ತು ಕೇರಳ ಕರಾವಳಿಗಳು, ಲಕ್ಷದ್ವೀಪ, ಮಾಲ್ಡೀವ್ಸ್ ಮತ್ತು ಕೊಮೊರಿನ್ ಪ್ರದೇಶದಲ್ಲಿ ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ನಿರೀಕ್ಷೆಯಿದೆ. ಕೆಲವು ಸ್ಥಳಗಳಲ್ಲಿ ಗಾಳಿಯ ವೇಗ ಗಂಟೆಗೆ 60 ಕಿ.ಮೀ.ವರೆಗೆ ತೀವ್ರಗೊಳ್ಳವ ಸಾಧ್ಯತೆ ಇದೆ. ನೈರುತ್ಯ ಅರೇಬಿಯನ್ ಸಮುದ್ರದ ಹಲವಾರು ಭಾಗಗಳಲ್ಲಿ, ವಿಶೇಷವಾಗಿ ಸೊಮಾಲಿಯಾ ಕರಾವಳಿಯಲ್ಲಿ, ಗಾಳಿಯ ವೇಗ ಗಂಟೆಗೆ 45 ರಿಂದ 55 ಕಿ.ಮೀ. ತಲುಪುವ ಸಾಧ್ಯತೆಯಿದೆ, ಗಾಳಿಯು ಗಂಟೆಗೆ 65 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಭೀತಿ ಇದೆ.





