ದಳಪತಿ ವಿಜಯ್ಗೆ ನೀಡಿದ್ದ ಭದ್ರತೆ ರಾತ್ರೋರಾತ್ರಿ ಹಿಂಪಡೆದ ಪೊಲೀಸರು
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಮುಖ್ಯಸ್ಥ ವಿಜಯ್ ಅವರಿಗೆ ನೀಡಲಾಗಿದ್ದ ಪೊಲೀಸ್ ಭದ್ರತೆಯನ್ನು ರಾಜ್ಯ ಸರ್ಕಾರ ರಾತ್ರೋರಾತ್ರಿ ಹಿಂಪಡೆದಿದೆ.
ಸರ್ಕಾರ ರಚನೆಯ ಕಸರತ್ತು ನಡೆಯುತ್ತಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ವಿಜಯ್ ಅವರಿಗೆ ಈ ಹಿಂದೆ 4 ಬೆಂಗಾವಲು ವಾಹನಗಳು ಹಾಗೂ 50ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳ ಭದ್ರತೆಯನ್ನು ಒದಗಿಸಲಾಗಿತ್ತು. ಆದರೆ, ಕಳೆದ ಎರಡು ದಿನಗಳಿಂದ ಈ ರಕ್ಷಣೆಯನ್ನು ಕಡಿತಗೊಳಿಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ವಿಜಯ್ ಅವರು ಸರ್ಕಾರ ರಚಿಸಲು ಅನುಮತಿ ಕೋರಿ ರಾಜ್ಯಪಾಲರಿಗೆ ಪತ್ರ ಸಲ್ಲಿಸಿದ್ದರು. ಆದರೆ, ಮ್ಯಾಜಿಕ್ ನಂಬರ್ ತಲುಪಲು ಅಗತ್ಯವಿರುವ ಬಹುಮತದ ಕೊರತೆಯಿಂದಾಗಿ ರಾಜ್ಯಪಾಲರು ಅವರನ್ನು ಸರ್ಕಾರ ರಚಿಸಲು ಆಹ್ವಾನಿಸಿಲ್ಲ ಎನ್ನಲಾಗಿದೆ. ಇದೇ ವೇಳೆ ‘ಯಾವುದೇ ಕಾರಣಕ್ಕೂ ಟಿವಿಕೆಗೆ ಬೆಂಬಲ ನೀಡುವುದಿಲ್ಲ’ ಎಂದು ಎಐಎಡಿಎಂಕೆ ಸ್ಪಷ್ಟಪಡಿಸಿರುವುದು ವಿಜಯ್ಗೆ ಮತ್ತೊಂದು ಹಿನ್ನಡೆಯಾಗಿದೆ.
ನೀಲಂಕರೈನಲ್ಲಿರುವ ವಿಜಯ್ ಅವರ ಮನೆಗೆ ಒದಗಿಸಲಾಗಿದ್ದ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ವಾಪಸ್ ಪಡೆಯಲಾಗಿದೆ. ಈ ಕುರಿತು ಅಧಿಕಾರಿಗಳು ಅಧಿಕೃತ ಸ್ಪಷ್ಟನೆ ನೀಡಿಲ್ಲವಾದರೂ, ವಿಜಯ್ ಅವರೇ ಸ್ವಯಂಪ್ರೇರಣೆಯಿಂದ ಬೆಂಗಾವಲು ವಾಹನಗಳನ್ನು ಹಿಂದಕ್ಕೆ ಕಳುಹಿಸಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಒಟ್ಟಿನಲ್ಲಿ ತಮಿಳುನಾಡು ರಾಜಕೀಯ ಹಗ್ಗಜಗ್ಗಾಟ ಈಗ ಭದ್ರತೆಯ ವಿಚಾರದವರೆಗೂ ಬಂದು ನಿಂತಿದೆ.





