ಪೆರುವಾಯಿ: ಕೆಎಸ್ ಆರ್ ಟಿ ಸಿ ಬಸ್ ಮತ್ತು ಟಿಪ್ಪರ್ ಅಪಘಾತ-ಪರಸ್ಪರ ಹಲ್ಲೆ ಪ್ರಕರಣ: ಬಸ್ ಮತ್ತು ಟಿಪ್ಪರ್ ಚಾಲಕ ಇಬ್ಬರೂ ಆಸ್ಪತ್ರೆಗೆ ದಾಖಲು-ಠಾಣೆಗೆ ದೂರು-ಪ್ರತಿದೂರು
ವಿಟ್ಲ: ಪೆರುವಾಯಿ ಸಮೀಪದ ಮುಳಿಯ ಎಂಬಲ್ಲಿ ಕೆಎಸ್ಆರ್ಟಿಸಿ ಬಸ್ ಹಾಗೂ ಟಿಪ್ಪರ್ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅಪಘಾತದ ಬಳಿಕ ಚಾಲಕರ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಹಲ್ಲೆಯಾದ ಘಟನೆ ವರದಿಯಾಗಿದೆ.
ಪಕಳಕುಂಜದಿಂದ ವಿಟ್ಲಕ್ಕೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಹಾಗೂ ಪೆರುವಾಯಿ ಕಡೆಗೆ ಹೋಗುತ್ತಿದ್ದ ಟಿಪ್ಪರ್ ಲಾರಿ ನಡುವೆ ಈ ಅಪಘಾತ ನಡೆದಿದೆ. ಡಿಕ್ಕಿಯ ರಭಸಕ್ಕೆ ಬಸ್ಸು ಮತ್ತು ಟಿಪ್ಪರ್ ಲಾರಿಯ ಮುಂಭಾಗ ಜಖಂಗೊಂಡಿದೆ. ಅದೃಷ್ಟವಶಾತ್ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ. ಬಸ್ ಚಾಲಕ ಸ್ಥಳವಕಾಶ ಇಲ್ಲದಿದ್ದರೂ ನೇರವಾಗಿ ನುಗ್ಗಿದ್ದರ ಪರಿಣಾಮ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಅಪಘಾತದ ಬೆನ್ನಲ್ಲೇ ಬಸ್ ಚಾಲಕ ಮತ್ತು ಟಿಪ್ಪರ್ ಚಾಲಕನ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಟಿಪ್ಪರ್ ಚಾಲಕ ಬಿಲಾಲ್ ಎಂಬಾತ ಕರ್ತವ್ಯದಲ್ಲಿದ್ದ ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ ಪ್ರಶಾಂತ್ ಅವರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ದೂರಲಾಗಿದೆ.
ಅದೇ ರೀತಿ ಟಿಪ್ಪರ್ ಚಾಲಕನ ಮೇಲೆಯೂ ಕೆಎಸ್ಆರ್ಟಿಸಿ ಬಸ್ಸು ಕಂಡೆಕ್ಟರ್ ಮತ್ತು ಚಾಲಕ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.
ಸದ್ಯ ಹಲ್ಲೆಗೊಳಗಾದ ಬಸ್ ಕಂಡಕ್ಟರ್ ಪ್ರಶಾಂತ್ ಅವರು ವಿಟ್ಲ ಸರ್ಕಾರಿ ಆಸ್ಪತ್ರೆಯಲ್ಲಿಯೂ ಇತ್ತ ಟಿಪ್ಪರ್ ಚಾಲಕ ಪುತ್ತೂರು ಮೆಡ್ ಲಾಂಡ್ ಖಾಸಗೀ ಆಸ್ಪತ್ರೆಯಲ್ಲಿಯೂ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.




