ಪೊಲೀಸರ ದೌರ್ಜನ್ಯ, ಬೆದರಿಕೆಗೆ ಹೆದರಿ 5ನೇ ಮಹಡಿಯಿಂದ ಜಿಗಿದು ಯುವಕ ಆತ್ಮಹತ್ಯೆ
ಇಂದೋರ್: ಪೊಲೀಸರ ದೌರ್ಜನ್ಯ ಮತ್ತು ಬೆದರಿಕೆಗೆ ಹೆದರಿ 23 ವರ್ಷದ ಯುವಕನೊಬ್ಬ ಐದನೇ ಮಹಡಿಯಿಂದ ಜಿಗಿದು ಪ್ರಾಣ ಬಿಟ್ಟಿರುವ ಘಟನೆ ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದಿದೆ.
ಮೃತನನ್ನು ತಾಪ್ತಿ ಕಾಂಪ್ಲೆಕ್ಸ್ ನಿವಾಸಿ ರಾಜ್ ಮಕ್ವಾನಾ ಎಂದು ಗುರುತಿಸಲಾಗಿದೆ. ತಡರಾತ್ರಿ ವಾಯುವಿಹಾರಕ್ಕೆಂದು ಮನೆಯಿಂದ ಹೊರಬಂದಿದ್ದ ಯುವಕನ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದೇ ಈ ದುರಂತಕ್ಕೆ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಘಟನೆಯ ವಿವರ:
ಗುರುವಾರ ನಸುಕಿನ ಜಾವ ಸುಮಾರು 2 ರಿಂದ 3 ಗಂಟೆಯ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ಮೃತ ರಾಜ್ ಕಳೆದ ಕೆಲವು ಸಮಯದಿಂದ ಮಾನಸಿಕ ಒತ್ತಡದಿಂದ ಬಳಲುತ್ತಿದ್ದನು ಮತ್ತು ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದನು. ಅನಾರೋಗ್ಯದ ಕಾರಣದಿಂದಾಗಿ ಆತ ಕಳೆದ ಹಲವು ತಿಂಗಳುಗಳಿಂದ ಮನೆಯಿಂದ ಹೊರಬರುತ್ತಿರಲಿಲ್ಲ. ಬುಧವಾರ ರಾತ್ರಿ ಅತಿಯಾದ ಸೆಖೆ ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಸ್ವಲ್ಪ ಶುದ್ಧ ಗಾಳಿ ಪಡೆಯಲು ಆತ ತನ್ನ ಫ್ಲಾಟ್ನಿಂದ ಕೆಳಗೆ ಬಂದಿದ್ದನು. ಈ ವೇಳೆ ಕಟ್ಟಡದ ಭದ್ರತಾ ಸಿಬ್ಬಂದಿ ಆತನನ್ನು ತಡೆದು ಇಷ್ಟು ತಡರಾತ್ರಿ ಯಾಕೆ ಹೊರಬಂದಿದ್ದೀಯಾ ಎಂದು ಪ್ರಶ್ನಿಸಿದ್ದಾನೆ. ಈ ವಿಚಾರವಾಗಿ ಇಬ್ಬರ ನಡುವೆ ಸಣ್ಣ ಮಾತಿನ ಚಕಮಕಿ ನಡೆದಿದೆ. ಕೂಡಲೇ ಭದ್ರತಾ ಸಿಬ್ಬಂದಿ ಸಮೀಪದಲ್ಲಿದ್ದ ಗಸ್ತಿನಲ್ಲಿದ್ದ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ರಾಜ್ನನ್ನು ತೀವ್ರವಾಗಿ ವಿಚಾರಣೆ ನಡೆಸಲಾರಂಭಿಸಿದರು. ಶಬ್ದ ಕೇಳಿ ರಾಜ್ ಕುಟುಂಬಸ್ಥರು ಕೆಳಗೆ ಓಡಿ ಬಂದಿದ್ದಾರೆ. ರಾಜ್ ಮಾನಸಿಕವಾಗಿ ಅಸ್ವಸ್ಥನಾಗಿದ್ದಾನೆ ಮತ್ತು ಆತ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಆತನ ಸಹೋದರಿ ನಿಕಿತಾ ಮತ್ತು ಪೋಷಕರು ಪೊಲೀಸರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದಾರೆ. ಆದರೆ ಪೊಲೀಸರು ಕುಟುಂಬಸ್ಥರ ಮಾತನ್ನು ಆಲಿಸುವ ಸ್ಥಿತಿಯಲ್ಲಿರಲಿಲ್ಲ ಎಂದು ಹೇಳಲಾಗಿದೆ. “ನನ್ನ ತಮ್ಮ ಯಾವುದೇ ತಪ್ಪು ಮಾಡಿರಲಿಲ್ಲ, ಆತ ಕೇವಲ ವಾಯುವಿಹಾರಕ್ಕಾಗಿ ಹೊರಬಂದಿದ್ದ ಅಷ್ಟೇ. ಆತ ಪೊಲೀಸರಲ್ಲಿ ಕ್ಷಮೆಯನ್ನೂ ಕೇಳಿದ. ಆದರೂ ಅಧಿಕಾರಿಯೊಬ್ಬರು ಆತನ ಕಪಾಳಕ್ಕೆ ಬಲವಾಗಿ ಹೊಡೆದರು” ಎಂದು ನಿಕಿತಾ ಕಣ್ಣೀರಿಡುತ್ತಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.




