ದಕ್ಷಿಣ ಕನ್ನಡ ಜಿಲ್ಲೆಗೆ ಆನೆ ಕಾರ್ಯಪಡೆ ಮಂಜೂರು: ಸರ್ಕಾರ ಆದೇಶ
ಸುಳ್ಯ: ದಕ್ಷಿಣ ಕನ್ನಡ (ದ.ಕ.) ಜಿಲ್ಲೆಯ ಮಂಗಳೂರು ಅರಣ್ಯ ವಿಭಾಗಕ್ಕೆ ಆನೆ ಕಾರ್ಯಪಡೆಯನ್ನು ಮಂಜೂರು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಇತ್ತೀಚಿನ ವರ್ಷಗಳಲ್ಲಿ, ಮಂಗಳೂರು ವಿಭಾಗದ ವ್ಯಾಪ್ತಿಯ ಉಪ್ಪಿನಂಗಡಿ, ಸುಳ್ಯ, ಬೆಳ್ತಂಗಡಿ, ಪುತ್ತೂರು, ಪಂಜ ಮತ್ತು ಸುಬ್ರಹ್ಮಣ್ಯ ವಲಯಗಳಲ್ಲಿ ಕಾಡು ಆನೆಗಳ ಉಪಟಳ ಹೆಚ್ಚಾಗಿದೆ.
ಬೆಳೆ ಹಾನಿ ಪ್ರಕರಣಗಳು ಮತ್ತು ಮಾನವ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಹಾಗೂ ಆನೆಗಳು ಜನವಸತಿ ಪ್ರದೇಶಗಳಿಗೆ ನುಗ್ಗಿದಾಗ ಮಡಿಕೇರಿ ವಿಭಾಗದಿಂದ ಕಾರ್ಯಪಡೆಯನ್ನು ಕರೆಯಿಸಬೇಕಿತ್ತು. ಇದರಿಂದಾಗಿ ಪ್ರಾಣಿಗಳನ್ನು ಮತ್ತೆ ಕಾಡಿಗೆ ಓಡಿಸುವಲ್ಲಿ ವಿಳಂಬವಾತ್ತಿತ್ತು.
ಪರಿಸ್ಥಿತಿಯನ್ನು ಪರಿಗಣಿಸಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಮಂಗಳೂರು ವಿಭಾಗದ ಅಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರತ್ಯೇಕ ಆನೆ ಕಾರ್ಯಪಡೆಯನ್ನು ರಚಿಸಲು ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ಪ್ರಸ್ತಾವನೆಯನ್ನು ಪರಿಶೀಲಿಸಿದ ನಂತರ, ಸರ್ಕಾರವು ಈಗ ಕಾರ್ಯಪಡೆ ರಚನೆಗೆ ಅನುಮೋದನೆ ನೀಡಿ ಆದೇಶ ಹೊರಡಿಸಿದೆ.
ಈ ಕಾರ್ಯಪಡೆಯು ಒಟ್ಟು 28 ಸದಸ್ಯರನ್ನು ಒಳಗೊಂಡಿದ್ದು, ಇದರಲ್ಲಿ ಒಬ್ಬರು ಉಪ ವಲಯ ಅರಣ್ಯ ಅಧಿಕಾರಿ, ಇಬ್ಬರು ಅರಣ್ಯ ಸಿಬ್ಬಂದಿ ಮತ್ತು 25 ವಾಹನ ಚಾಲಕರು ಅಥವಾ ಗುತ್ತಿಗೆ ಆಧಾರದ ಮೇಲೆ ಸಮಾನ ಸಿಬ್ಬಂದಿ ಇರಲಿದ್ದಾರೆ.
ಆನೆ ಕಾರ್ಯಪಡೆಯ ಪ್ರಧಾನ ಕಚೇರಿ ಸುಳ್ಯದಲ್ಲಿದ್ದು, ಈ ತಂಡವು ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ನಿರ್ದೇಶನದಲ್ಲಿ ಕಾರ್ಯನಿರ್ವಹಿಸಲಿದೆ.




