ಪುತ್ತೂರು: ಬಿಜೆಪಿ ಮುಖಂಡನ ಮಗನಿಂದ ವಂಚನೆ: ಸಂತ್ರಸ್ತೆ ಮನೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಭೇಟಿ
ಪುತ್ತೂರು: ಬಿಜೆಪಿ ಮುಖಂಡನ ಮಗನಿಂದ ವಂಚನೆಗೊಳಗಾದ ಸಂತ್ರಸ್ತೆ ಮನೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಪುತ್ತೂರಿಗೆ ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ.
ಮದುವೆಯಾಗುವುದಾಗಿ ನಂಬಿಸಿ ಬಳಿಕ ಮಗು ಕೊಟ್ಟು ಇದೀಗ ಮದುವೆ ಆಗುವುದಿಲ್ಲ ವಂಚನೆ ಮಾಡಿದ ಪ್ರಕರಣದ ಸಂತ್ರಸ್ಥೆ ಮನೆಗೆ ನಾಗಲಕ್ಷ್ಮಿ ಚೌಧರಿ ಭೇಟಿ ನೀಡಿ ಸಂತ್ರಸ್ತೆ ಜೊತೆ ಮಾತುಕತೆ ನಡೆಸಿದರು.
ಈ ವೇಳೆ ಸಂತ್ರಸ್ತೆಯ ಮಗುವನ್ನು ನಾಗಲಕ್ಷ್ಮಿ ಚೌಧರಿ ಮುದ್ದಾಡಿದರು. ಅಲ್ಲದೆ ಸಂತ್ರಸ್ಥೆಯ ಎಲ್ಲಾ ರೀತಿಯ ಹೋರಾಟಕ್ಕೆ ಜೊತೆಯಾಗಿರುವುದಾಗಿ ಭರವಸೆ ನೀಡಿದರು. ಮತ್ತೆ ಶಿಕ್ಷಣ ಮುಂದುವರಿಸುವಂತೆ ಸಂತ್ರಸ್ತೆ ನಾಗಲಕ್ಷ್ಮೀ ಅವರು ಸೂಚಿಸಿದರು. ಗಟ್ಟಿಯಾಗಿ ನಿಂತು ಸಂಕಷ್ಟ ಎದುರಿಸುವಂತೆ ಸಂತ್ರಸ್ತೆ ಮತ್ತು ಆಕೆಯ ತಾಯಿಗೆ ಮನವಿ ಮಾಡಿದರು.
ಅಲ್ಲದೆ ಶಿಕ್ಷಣ ಮುಂದುವರಿಸಲು ಬೇಕಾದ ಎಲ್ಲಾ ವ್ಯವಸ್ಥೆ ಮಾಡುವ ಭರವಸೆ ನೀಡಿದರು. ಯಾವುದೇ ಕಾರಣಕ್ಕೂ ಜೀವನದಲ್ಲಿ ಕುಗ್ಗಿ ಕೆಟ್ಟ ನಿರ್ಧಾರ ತೆಗೆದುಕೊಳ್ಳದಂತೆ ಸಂತ್ರಸ್ತೆಗೆ ನಾಗಲಕ್ಷ್ಮಿ ಧೈರ್ಯ ತುಂಬಿದ್ದಾರೆ.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಮಹಿಳಾ ಆಯೋಗ ತಾಯಿಯಂತೆ ಸಂತ್ರಸ್ತೆಯ ಪರ ನಿಲ್ಲುತ್ತದೆ, ಎಲ್ಲಾ ಸಂತ್ರಸ್ತ ಮಹಿಳೆಯರಿಗೆ ಆಯೋಗ ತಾಯಿಯಿದ್ದಂತೆ. ತಾಯಿ ಸ್ಥಾನದಲ್ಲಿ ನಿಂತು ಮಹಿಳೆಯತ ಸಂಕಷ್ಟಗಳಿಗೆ ಸ್ಪಂದಿಸುತ್ತೇನೆ. ಸಂತ್ರಸ್ತೆ ಯುವತಿಗೆ ಎಲ್ಲಾ ರೀತಿಯ ಸಹಾಯವನ್ನು ಆಯೋಗದ ಮುಖಾಂತರ ಮಾಡಲಾಗುವುದು. ಯುವತಿಯ ಮುಂದಿನ ಶಿಕ್ಷಣಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡಿ ಆಕೆಯನ್ನು ಆರ್ಥಿಕ,ಶೈಕ್ಷಣಿಕವಾಗಿ ಸದೃಢಗೊಳಿಸುವ ಪ್ರಯತ್ನವನ್ನೂ ಮಾಡುತ್ತೇನೆ. ಪ್ರಕರಣ ನ್ಯಾಯಾಲಯದ ಮುಂದೆ ಇರುವಾಗ ಇದಕ್ಕಿಂತ ಹೆಚ್ಚು ಮಾತನಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.




