ತನ್ನ ಹುಟ್ಟುಹಬ್ಬದ ದಿನವೇ ರಸ್ತೆ ಅಪಘಾತದಲ್ಲಿ ಯುವಕ ಸಾವು
ಬೆಂಗಳೂರು: ಯುವಕನೋರ್ವ ತನ್ನ ಹುಟ್ಟುಹಬ್ಬದ ದಿನವೇ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಐವರಕಂಡಪುರ ಸಮೀಪ ನಡೆದಿದೆ. ಪವನ್ (24) ಮೃತ ಯುವಕ.
ಸ್ನೇಹಿತರೊಂದಿಗೆ ಹುಟ್ಟುಹಬ್ಬದ ಆಚರಣೆ ಮುಗಿಸಿ ಕೇಕ್ ಕಟ್ ಮಾಡಿ ಮನೆಗೆ ಮರಳುತ್ತಿದ್ದಾಗ, ಪವನ್ ಚಲಾಯಿಸುತ್ತಿದ್ದ ಬೈಕ್ ಮತ್ತು ಎದುರಿಗೆ ಬರುತ್ತಿದ್ದ ಗೂಡ್ಸ್ ವಾಹನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಗೂಡ್ಸ್ ವಾಹನ ಮತ್ತು ಬೈಕ್ ಅತಿ ವೇಗದಲ್ಲಿದ್ದ ಕಾರಣ ಡಿಕ್ಕಿಯ ತೀವ್ರತೆ ಹೆಚ್ಚಾಗಿದ್ದು, ಪವನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.




