ವಿಟ್ಲ ಪಟ್ಟಣ ಪಂಚಾಯತಿ ಸಾಮಾನ್ಯ ಸಭೆ: ಕಟ್ಟಡಗಳ ಕಲುಷಿತ ನೀರಿನಿಂದ ಪರಿಸರದಲ್ಲಿ ದುರ್ನಾತ: ಕ್ರಮಕ್ಕೆ ಸದಸ್ಯರ ಒತ್ತಾಯ
ವಿಟ್ಲ: ಪಟ್ಟಣ ಪಂಚಾಯತಿ ಸಾಮಾನ್ಯ ಸಭೆ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ಅವರ ಅಧ್ಯಕ್ಷತೆಯಲ್ಲಿ ಪಟ್ಟಣ ಪಂಚಾಯತಿ ಸಭಾಭವನದಲ್ಲಿ ಶನಿವಾರ ನಡೆಯಿತು.
ವಿಟ್ಲ ಪಟ್ಟಣದ ಹಲವು ಕಟ್ಟಡಗಳ ಕಲುಷಿತ ನೀರನ್ನು ಇಂಗುಗುಂಡಿಗಳಿಗೆ ಬಿಡದೇ ತೋಡುಗಳಿಗೆ ಬಿಡುತ್ತಿದ್ದು ಪರಿಸರವಿಡೀ ದುರ್ನಾತ ಬೀರುತ್ತಿದ್ದು ತಕ್ಷಣ ಸೂಕ್ತ ಕ್ರಮಕೈಗೊಳ್ಳಬೇಕು ಸದಸ್ಯರು ಆಗ್ರಹಿಸಿದರು.
ಅಧ್ಯಕ್ಷರ ಅನುಮತಿ ಮೇರೆಗೆ ಇತರ ವಿಷಯಗಳ ಸಂದರ್ಭದಲ್ಲಿ ಮಾತನಾಡಿದ ಆಡಳಿತ ಪಕ್ಷದ ಸದಸ್ಯ ಜಯಂತ ವಿಷಯ ಪ್ರಸ್ತಾಪಿಸಿ, ಇಂಗುಗುಂಡಿಗಳನ್ನು ಬಳಕೆ ಮಾಡಬೇಕೆಂಬ ನಿಯಮ ಇದ್ದರೂ ಪಾಲನೆ ಆಗುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದರು. ಮುಂದಿನ ದಿನಗಳಲ್ಲಿ ಇಂತಹದ್ದು ನಡೆದರೆ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ಕರುಣಾಕರ ವಿ. ಭರವಸೆ ನೀಡಿದರು.
ವಿಟ್ಲ ದೇವಸ್ಥಾನದ ಪಕ್ಕದ ಸಾರ್ವಜನಿಕ ಶೌಚಾಲಯ ಅವ್ಯವಸ್ಥೆಯ ಆಗರವಾಗಿದ್ದು ಕಳೆದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿದ್ದೆ ಆದರೆ ಇನ್ನೂ ದುರಸ್ತಿ ಆಗಿಲ್ಲ. ಅದನ್ನು ತಕ್ಷಣ ದುರಸ್ತಿ ಮಾಡುವಂತೆ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷರೂ ಆಗಿರುವ ಆಡಳಿತ ಪಕ್ಷದ ಸದಸ್ಯ ಅರುಣ್ ವಿಟ್ಲ ಆಗ್ರಹಿಸಿದರು.
ಕಳೆದ ಸಭೆಗಳಲ್ಲಿ ಕೈಗೊಂಡ ಕೆಲವು ನಿರ್ಣಯಗಳು ಅನುಷ್ಠಾನ ಆಗದ ಬಗ್ಗೆ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯ ಆರಂಭದಲ್ಲಿ ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ ಎಂಬ ಘೋಷಣೆಯ ಜಾಗೃತಿ ಮಾಡಿಸುವ ಕರಪತ್ರ ಕರಪತ್ರ ಮತ್ತು ಬಟ್ಟೆಯ ಕೈಚೀಲವನ್ನು ಬಿಡುಗಡೆ ಮಾಡಲಾಯಿತು.
ಕರುಣಾಕರ ನಾಯ್ತೊಟ್ಟು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷೆ ಸಂಗೀತಾ ಪಾಣೆಮಜಲು, ಸ್ಥಾಯಿ ಸಮಿತಿ ಅಧ್ಯಕ್ಷ ರವಿಪ್ರಕಾಶ್, ಮುಖ್ಯಾಧಿಕಾರಿ ಕರುಣಾಕರ ವಿ, ಸಮುದಾಯ ಸದಸ್ಯರಾದ ಅರುಣ್ ಎಂ. ವಿಟ್ಲ, ವಿ. ಕೆ. ಎಂ. ಅಶ್ರಫ್, ಹಸೈನಾರ್ ನೆಲ್ಲಿಗುಡ್ಡೆ, ಅಶೋಕ್ ಕುಮಾರ್ ಶೆಟ್ಟಿ, ವಸಂತ, ಗೋಪಿಕೃಷ್ಣ, ರಕ್ಷಿತಾ ಸನತ್, ಡೀಕಯ್ಯ, ಜಯಂತ ಸಿ.ಎಚ್, ವಿಜಯಲಕ್ಷ್ಮೀ, ಸುನೀತಾ, ಲತಾವೇಣಿ, ಪದ್ಮಿನಿ, ಶಾಕೀರಾ, ನಾಮನಿರ್ದೇಶಿತ ಸದಸ್ಯರಾದ, ಶ್ರೀನಿವಾಸ ಶೆಟ್ಟಿ ಕೊಲ್ಯ, ಸುನೀತಾ ಕೋಟ್ಯಾನ್, ತೆರಿಗೆ ವಸೂಲಿಗಾರ ಚಂದ್ರಶೇಖರ ವರ್ಮ ಹಾಗೂ ಇತರ ಸಿಬ್ಬಂದಿ ಉಪಸ್ಥಿತರಿದ್ದರು.




