ಮಾಜಿ ಗೃಹ ಸಚಿವ ರಾಜೇಂದ್ರ ತ್ರಿಪಾಠಿ ಸೇರಿದಂತೆ ಹಲವರು ಬಿಜೆಪಿ ಗೆ ಸೇರ್ಪಡೆ
ಲಕ್ನೋ: ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಪಕ್ಷಾಂತರ ಪರ್ವ ತೀವ್ರವಾಗಿದ್ದು, ಮಾಜಿ ಗೃಹ ಸಚಿವ ರಾಜೇಂದ್ರ ತ್ರಿಪಾಠಿ ಸೇರಿದಂತೆ ಕಾಂಗ್ರೆಸ್, ಬಿಎಸ್ಪಿ, ಎಸ್ಪಿ ಮತ್ತು ಆರ್ಎಲ್ಡಿಯ ಹಲವು ನಾಯಕರು ಶುಕ್ರವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಮಾಜಿ ಗೃಹ ಸಚಿವ ಮತ್ತು ಮೂರು ಬಾರಿ ಪ್ರಯಾಗರಾಜ್ ಶಾಸಕ ರಾಜೇಂದ್ರ ತ್ರಿಪಾಠಿ ಇಲ್ಲಿಯ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು.
ಬಿಎಸ್ಪಿಯ ಮಾಜಿ ಶಾಸಕ ಕೃಷ್ಣಪಾಲ್ ಸಿಂಗ್ ರಜಪೂತ್ (ಝಾನ್ಸಿ), ಆರ್ಎಲ್ಡಿಯ ಮುನಿ ದೇವ್ ಶರ್ಮಾ (ಬಿಜ್ನೋರ್), ಬಿಎಸ್ಪಿಯ ವೀರ್ ಸಿಂಗ್ ಪ್ರಜಾಪತಿ (ಬುಲಂದ್ಶಹರ್), ಮತ್ತು ಎಸ್ಪಿಯ ಸಂಸ್ಥಾಪಕ ಸದಸ್ಯ ಕುನ್ವರ್ ಬಲ್ಬೀರ್ ಸಿಂಗ್ ಚೌಹಾಣ್ ಶುಕ್ರವಾರ ಪಕ್ಷಕ್ಕೆ ಸೇರ್ಪಡೆಗೊಂಡವರಲ್ಲಿ ಸೇರಿದ್ದಾರೆ ಎಂದು ಬಿಜೆಪಿ ರಾಜ್ಯ ಸಹ-ಮಾಧ್ಯಮ ಉಸ್ತುವಾರಿ ಹಿಮಾಂಶು ದುಬೆ ತಿಳಿಸಿದ್ದಾರೆ.
ನಿವೃತ್ತ ಐಪಿಎಸ್ ಅಧಿಕಾರಿ ಗುರ್ಬಚನ್ ಲಾಲ್ ಕೂಡ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಪಕ್ಷ ಸೇರುವ ಸಂದರ್ಭದಲ್ಲಿ, ನಾಯಕರು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ರಾಷ್ಟ್ರೀಯತಾವಾದಿ ನೀತಿಗಳಲ್ಲಿ ನಂಬಿಕೆಯನ್ನು ವ್ಯಕ್ತಪಡಿಸಿದರು ಎಂದು ಅವರು ಹೇಳಿದರು.




