ನಾನು ತಾಯಿಯ ಬಳಿ ಹೋಗಿತ್ತಿದ್ದೇನೆ ಎಂದು ಡೆತ್ ನೋಟ್ ಬರೆದಿಟ್ಟು ಪುತ್ರ ಆತ್ಮಹತ್ಯೆ
ಸೋಲಾಪುರ: ಆತ 10ನೇ ತರಗತಿಯಲ್ಲಿ ಶೇ. 92ರಷ್ಟು ಅಂಕ ಪಡೆದಿದ್ದ ಪ್ರತಿಭಾನ್ವಿತ ವಿದ್ಯಾರ್ಥಿ. ಕೆಲವು ತಿಂಗಳ ಹಿಂದಷ್ಟೇ ಪಿಯುಸಿಗೆ ಸೇರಿದ್ದ. ನೀಟ್ ಪರೀಕ್ಷೆಗೆ ತಯಾರಿ ಕೂಡ ನಡೆಸುತ್ತಿದ್ದ. ಆದರೆ, ಆತನ ಭವಿಷ್ಯ ಅರಳುವ ಮೊದಲೇ ಕಮರಿಹೋಗಿದೆ. ಕನಸಿನಲ್ಲಿ ಬಂದು ಅಮ್ಮ ಕರೆದಳು ಎಂಬ ಕಾರಣಕ್ಕೆ ಆತ ಆತ್ಮಹತ್ಯೆ ಮಾಡಿಕೊಂಡು ತಾಯಿಯ ಬಳಿ ಹೋಗಿದ್ದಾನೆ! ಮಹಾರಾಷ್ಟ್ರದ ಸೋಲಾಪುರದಲ್ಲಿ ಈ ದಾರುಣ ಘಟನೆ ನಡೆದಿದೆ.
ತಾಯಿಯ ಇತ್ತೀಚಿನ ಸಾವಿನಿಂದ ಮನನೊಂದ 16 ವರ್ಷದ ಬಾಲಕ ಶಿವಶರಣ್ ಇಂದು ಮಹಾರಾಷ್ಟ್ರದ ಸೋಲಾಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಶಿವಶರಣ್ ಭೂತಾಲಿ ಟಾಲ್ಕೋಟಿ ಎಂಬ ಬಾಲಕ ತನ್ನ ಚಿಕ್ಕಪ್ಪನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹುಡುಗನ ತಾಯಿ 3 ತಿಂಗಳ ಹಿಂದೆ ಕಾಮಾಲೆ ರೋಗದಿಂದ ಸಾವನ್ನಪ್ಪಿದ್ದರು. ಆತನ ಸಾವನ್ನಪ್ಪಿದ ಸ್ಥಳದಲ್ಲಿ ಸೂಸೈಡ್ ನೋಟ್ ಸಿಕ್ಕಿದೆ.
ಅದರಲ್ಲಿ ಆ ಹುಡುಗ ತನ್ನ ತಾಯಿಯ ಕನಸು ಕಂಡಿದ್ದಾಗಿ ಬರೆದಿದ್ದಾನೆ. ನಾನು ಅಮ್ಮನ ಬಳಿ ಬರಬೇಕೆಂದು ಅಮ್ಮ ನನ್ನನ್ನು ಕರೆದರು. ಹೀಗಾಗಿ, ಅವಳ ಬಳಿ ಹೋಗುತ್ತಿದ್ದೇನೆ ಎಂದು ಆತ ಬರೆದಿದ್ದಾನೆ.




