ವಿಟ್ಲ ಪ.ಪಂ ಚುನಾವಣೆ ಬಿಜೆಪಿಯತ್ತ ಮತದಾರರ ಒಲವು:
ಮತ್ತೆ ಬಿಜೆಪಿ ಆಡಳಿತಕ್ಕೆ: ಸಾಜ ರಾಧಾಕೃಷ್ಣ ಆಳ್ವ
ವಿಟ್ಲ: ವಿಟ್ಲ ಪಟ್ಟಣ ಪಂಚಾಯಿತಿಗೆ ಎಲ್ಲಾ ರೀತಿಯ ಮೂಲ ಸೌಕರ್ಯಗಳನ್ನು ಪೂರೈಸುವುದೇ ಬಿಜೆಪಿ ಆಡಳಿತದ ಗುರಿಯಾಗಿದೆ. ಪ್ರತೀ ಮನೆಗಳಿಗೆ ಪಕ್ಷದ ಕಾರ್ಯಕರ್ತರು ತೆರಳಿ ಮತದಾರರಿಗೆ ನಮ್ಮ ಪಕ್ಷದ ಸಾಧನೆಗಳ ಬಗ್ಗೆ ಮನವರಿಕೆ ಮಾಡುತ್ತಿದ್ದಾರೆ. ವಿಟ್ಲ ವ್ಯಾಪ್ತಿಗೆ ಪುತ್ತೂರು ಶಾಸಕರು ಒತ್ತು ನೀಡಿ ಅಭಿವೃದ್ಧಿ ಕಾಮಗಾರಿ ಮಾಡಿದ್ದಾರೆ ಎಂದ ಅವರು ವಿಟ್ಲದಲ್ಲಿ ಒಳಚರಂಡಿ, ರಿಂಗ್ ರಸ್ತೆ, ಕುಡಿಯುವ ನೀರು, ವಿಟ್ಲ ಸಮುದಾಯ ಮೇಲ್ದರ್ಜೆಗೇರಿಸಲು ಆದ್ಯತೆ ನೀಡಲಾಗಿದೆ.
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ನಿಶ್ಚಿತ ೧೫ ಸ್ಥಾನಗಳನ್ನು ಪಡೆದು ಅಧಿಕಾರಕ್ಕೆ ಬರುತ್ತದೆ ಎಂದು ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ತಿಳಿಸಿದರು.
ಅವರು ಬುಧವಾರ ವಿಟ್ಲ ಪಟ್ಟಣ ಪಂಚಾಯಿತಿ ಚುನಾವಣೆಯ ಅಂಗವಾಗಿ ಮೂರನೇ ಹಂತದ ಪ್ರಚಾರದ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಚುನಾವಣಾ ಉಸ್ತುವಾರಿ ವಹಿಸಿದ್ದ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮದಾಸ ಬಂಟ್ವಾಳ ಮಾತನಾಡಿ ಜನರ ಸಂಕಲ್ಪ ಪತ್ರದ ಪ್ರಕಾರ ಅಭಿವೃದ್ಧಿ ಕಾರ್ಯ ನಡೆಸಲಾಗುತ್ತಿದೆ. ಕಾರ್ಯಕರ್ತರು ಉತ್ಸಾಹಭರಿತರಾಗಿ ಪ್ರಚಾರ ನಡೆಸುತ್ತಿದ್ದಾರೆ. ಎರಡನೇ ಹಂತದ ಪ್ರಚಾರ ಕಾರ್ಯ ಪೂರೈಸಿದ್ದು, ಮೂರನೇ ಹಂತದ ಪ್ರಚಾರ ಕಾರ್ಯ ನಡೆಸಲಾಗುತ್ತಿದ್ದು, ಮತದಾರರು ಬಿಜೆಪಿ ಪಕ್ಷದತ್ತ ಪೂರ್ನ ಒಲವು ತೋರಿದ್ದಾರೆ ಎಂದರು.
ಪ್ರಚಾರ ಸಮಿತಿ ಸಂಚಾಲಕ ಚಣಿಲ ತಿಮ್ಮಪ್ಪ ಶೆಟ್ಟಿ, ಬಿಜೆಪಿ ಗ್ರಾಮಾಂತರ ಮಂಡಲ ಕಾರ್ಯದರ್ಶಿ ನಿತೀಶ್ ಶಾಂತಿವನ, ಉಸ್ತುವಾರಿ ಸಮಿತಿಯ ಪುರುಷೋತ್ತಮ ಮುಂಗ್ಲಿಮನೆ, ಮುಕುಂದ ಬಜತ್ತೂರು, ದಯಾನಂದ ಶೆಟ್ಟಿ ಉಜಿರೆಮಾರು, ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಅರುಣ್ ವಿಟ್ಲ ಉಪಸ್ಥಿತರಿದ್ದರು.




