ವಿದೇಶಕ್ಕೆ ತೆರಳಲಿರುವ ಸರ್ವ ಪಕ್ಷ ನಿಯೋಗದಲ್ಲಿ ಕರ್ನಾಟಕದ ಬ್ರಿಜೇಶ್ ಚೌಟ ಮತ್ತು ತೇಜಸ್ವಿ ಸೂರ್ಯ ಗೆ ಸ್ಥಾನ
ಮಂಗಳೂರು: ಪಾಕಿಸ್ತಾನದೊಂದಿಗಿನ ಸಂಘರ್ಷದ ಬೆನ್ನಲ್ಲೇ, ಭಯೋತ್ಪಾದನೆ ಕುರಿತ ತನ್ನ ನಿಲುವನ್ನು ಜಾಗತಿಕ ಸಮುದಾಯಕ್ಕೆ ವಿವರಿಸಲು ರಚಿಸಲಾದ ಸರ್ವಪಕ್ಷಗಳ ಸದಸ್ಯರ ನಿಯೋಗದಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಮತ್ತು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ತೇಜಸ್ವಿ ಸೂರ್ಯ ಸ್ಥಾನಪಡೆದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕ್ಯಾ.ಚೌಟ, ‘ಜಾಗತಿಕ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಸಿಕ್ಕಿರುವ ಈ ಪ್ರಪ್ರಥಮ ಅವಕಾಶವು ನನ್ನ ಪಾಲಿಗೆ ಶ್ರೇಷ್ಠವಾದುದು.
ಹೇಡಿತನದ ಭಯೋತ್ಪಾದಕ ದಾಳಿಗೆ ಆಪರೇಷನ್ ಸಿಂಧೂರ ಮೂಲಕ ಪ್ರತೀಕಾರ ತೀರಿಸಿಕೊಂಡ ರೀತಿಯ ಬಗ್ಗೆ ಒಬ್ಬ ಯೋಧನಾಗಿ ನನಗೆ ಅಪಾರ ಹೆಮ್ಮೆಯಿದೆ. ಈ ಎಲ್ಲದರ ಹಿಂದಿನ ಶಕ್ತಿಯಾಗಿರುವ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನದ ಮತ್ತು ಧ್ಯೇಯದ ಧ್ವನಿಯಾಗಲು ಈ ನಿಯೋಗದ ಭಾಗವಾಗಿ ಅವಕಾಶ ನೀಡಿದ್ದಕ್ಕಾಗಿ ನಾನು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ತಿಳಿಸಿದ್ದಾರೆ.
ಡಾ.ಶಶಿ ತರೂರ್ ನೇತೃತ್ವದ ನಿಯೋಗದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಇದ್ದು, ಈ ತಂಡವು ಅಮೆರಿಕ, ಪನಾಮ, ಗಯಾನಾ, ಬ್ರೆಜಿಲ್, ಕೊಲೊಂಬಿಯ ದೇಶಗಳಿಗೆ ಭೇಟಿ ಕೊಡಲಿದೆ. ಕನಿಮೊಳಿ ಕರುಣಾನಿಧಿ ನೇತೃತ್ವದ ತಂಡವು ಸ್ಪೇನ್, ಗ್ರೀಸ್, ಸ್ಲೊವೇನಿಯ, ರಷ್ಯಾ ದೇಶಗಳಿಗೆ ಭೇಟಿ ನೀಡಲಿದ್ದು, ಈ ನಿಯೋಗದಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಕ್ಯಾ. ಬ್ರಿಜೇಶ್ ಚೌಟ ಇರಲಿದ್ದಾರೆ.
ಕ್ಯಾ.ಚೌಟ ಅವರು ಸದಸ್ಯರಾಗಿರುವ ಡಿಎಂಕೆ ಸಂಸದೆ ಕನಿಮೋಳಿ ನೇತೃತ್ವದ ಎಂಟು ಮಂದಿ ಸಂಸದರ ನಿಯೋಗವು ರಷ್ಯಾ, ಸ್ಪೇನ್, ಗ್ರೀಸ್, ಸ್ಲೋವೇನಿಯಾ, ಲಾಟ್ವಿಯಾ ದೇಶಗಳಿಗೆ ಭೇಟಿ ನೀಡಲಿದೆ.





