ಶ್ರೀ ಪದ್ಮನಾಭಸ್ವಾಮಿ ದೇವಾಲಯದ ಭದ್ರತಾ ಕೊಠಡಿಯಿಂದ ಚಿನ್ನದ ಸರಳು ನಾಪತ್ತೆ
ತಿರುವನಂತಪುರಂ: ಬೆಸುಗೆ ಹಾಕುವ ಉದ್ದೇಶಕ್ಕೆ ಬಳಸಲಾಗುವ 107 ಗ್ರಾಂನ ಚಿನ್ನದ ಸರಳು ತಿರುವನಂತಪುರದ ಶ್ರೀ ಪದ್ಮನಾಭಸ್ವಾಮಿ ದೇವಾಲಯದ ಭದ್ರತಾ ಕೊಠಡಿಯಿಂದ ಕಾಣೆಯಾಗಿದೆ.
ಮೇ 7ರಿಂದ ದುರಸ್ಥಿಯಲ್ಲಿರುವ ದೇವಾಲಯದ ಬಾಗಿಲಿನ ಕೆಲಸವನ್ನು ಶನಿವಾರ ಬೆಳಗ್ಗೆ ಪುನಾರಂಭಿಸಿದಾಗ ಚಿನ್ನದ ಸರಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ದುರಸ್ಥಿ ಕೆಲಸವನ್ನು ಸುಗಮಗೊಳಿಸಲು ದೇವಾಲಯದ ಬಾಗಿಲಿನ ಚಿನ್ನದ ಸರಳನ್ನು ತಾತ್ಕಾಲಿಕವಾಗಿ ತೆಗೆಯಲಾಗಿತ್ತು.
ಇಂತಹ ಎಲ್ಲಾ ಚಟುವಟಿಕೆಗಳನ್ನು ಪೊಲೀಸರ ಕಟ್ಟುನಿಟ್ಟಿನ ಮೇಲ್ವಿಚಾರಣೆಯಲ್ಲಿ ನಡೆಸಲಾಗಿತ್ತು. ಬಳಕೆಯ ನಂತರ ಈ ಚಿನ್ನದ ಸರಳನ್ನು ಸುರಕ್ಷಿತವಾಗಿ ಭದ್ರತಾ ಕೊಠಡಿಯಲ್ಲಿ ತಂದು ಇರಿಸಲಾಗಿತ್ತು ಎಂದು ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಮಹೇಶ್ ತಿಳಿಸಿದ್ದಾರೆ.
”ಕಾರ್ಮಿಕರು ಎರಡು ದಿನಗಳ ರಜೆಯಲ್ಲಿ ಇದ್ದರು. ಅವರು ಶನಿವಾರ ಮತ್ತೆ ಕೆಲಸ ಆರಂಭಿಸಿದರು. ಆಗ ಚಿನ್ನದ ಸರಳು ನಾಪತ್ತೆಯಾಗಿರುವುದು ನಮಗೆ ತಿಳಿಯಿತು” ಎಂದು ಮಹೇಶ್ ಹೇಳಿದ್ದಾರೆ. ಚಿನ್ನದ ಸರಳನ್ನು ಬಟ್ಟೆಯ ಚೀಲದಿಂದ ಕೆಲಸ ನಡೆಯುತ್ತಿರುವ ಮಂಡಪಂಗೆ ವರ್ಗಾಯಿಸುವ ಸಂದರ್ಭ ಅದು ನಾಪತ್ತೆಯಾಗಿರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.
ಈ ಘಟನೆಯನ್ನು ಪೊಲೀಸರಿಗೆ ವರದಿ ಮಾಡಲಾಗಿದೆ. ಅವರು ತನಿಖೆ ಆರಂಭಿಸಿದ್ದಾರೆ. ಕಾಣೆಯಾದ ಚಿನ್ನದ ಸರಳನ್ನು ಪತ್ತೆ ಹಚ್ಚಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.




