ರಸ್ತೆಗಳನ್ನು ಹೇಮಾ ಮಾಲಿನಿ ಕೆನ್ನೆಗೆ ಹೋಲಿಸಿದ ಮಹಾರಾಷ್ಟ್ರ ಸಚಿವ: ವ್ಯಾಪಕ ವಿರೋಧ
ಮುಂಬೈ: ಮಹಾರಾಷ್ಟ್ರದ ಸಚಿವ, ಶಿವಸೇನಾ ನಾಯಕ ಗುಲಾಬ್ ರಾವ್ ಪಾಟೀಲ್ ತಮ್ಮ ಕ್ಷೇತ್ರದ ರಸ್ತೆಗಳನ್ನು ನಟಿ, ಸಂಸದೆ ಹೇಮಾ ಮಾಲಿನಿ ಕೆನ್ನೆಗಳಿಗೆ ಹೋಲಿಸಿದ್ದು, ಆಕ್ಷೇಪಕ್ಕೆ ಗುರಿಯಾಗಿದೆ. ರಾಜ್ಯ ಮಹಿಳಾ ಆಯೋಗವು ಸಚಿವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ.
ಉದ್ಧವ್ ಠಾಕ್ರೆ ನೇತೃತ್ವದ ‘ಮಹಾ ವಿಕಾಸ್ ಅಘಾಡಿ’ ನೇತೃತ್ವದ ಸರ್ಕಾರದಲ್ಲಿ ನೀರು ಸರಬರಾಜು ಮತ್ತು ನೈರ್ಮಲ್ಯ ಸಚಿವರಾಗಿರುವ ಪಾಟೀಲ್, ಜಲಗಾಂವ್ನಲ್ಲಿ ರ್ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ, ’30 ವರ್ಷಗಳಿಂದ ಶಾಸಕರಾಗಿರುವವರು ನನ್ನ ಕ್ಷೇತ್ರಕ್ಕೆ ಬಂದು ನೋಡಬೇಕು. ಅವರು ಹೇಮಾ ಮಾಲಿನಿಯ ಕೆನ್ನೆಗಳನ್ನು ಇಷ್ಟಪಡದಿದ್ದಲ್ಲಿ ನಾನು ರಾಜೀನಾಮೆ ನೀಡುವೆ’ ಎಂದು ಹೇಳಿದ್ದಾರೆ.
ಹೇಳಿಕೆಯನ್ನು ಎನ್ಸಿಪಿ ನಾಯಕ ಏಕನಾಥ್ ಖಡ್ಸೆ ಖಂಡಿಸಿದ್ದಾರೆ. ಹೇಳಿಕೆಯನ್ನು ಮಹಾರಾಷ್ಟ್ರ ಮಹಿಳಾ ಆಯೋಗ ಖಂಡಿಸಿದ್ದು, ಕ್ಷಮೆಯಾಚಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿತ್ತು.
ಪಾಟೀಲ್ ಹೇಳಿಕೆಗೆ ಆಡಳಿತಾರೂಢ ಶಿವಸೇನಾ ಈವರೆಗೆ ಪ್ರತಿಕ್ರಿಯೆ ನೀಡಿಲ್ಲ. ಹೇಳಿಕೆಗೆ ವ್ಯಾಪಕ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ಸಚಿವರು ಕ್ಷಮೆಯಾಚಿಸಿದ್ದಾರೆ.




