ಹಾವು ರಕ್ಷಣೆ ಮಾಡಲು ಹೋಗಿ ಹಾವು ಕಚ್ಚಿ ಮೃತ್ಯು
ಹಾವೇರಿ: ಇಟ್ಟಿಗೆ ಬಟ್ಟೆಯಲ್ಲಿ ಅವಿತುಕೊಂಡಿರುವ ಹಾವುಯೊಂದನ್ನು ರಕ್ಷಣೆ ಮಾಡಿ ಬೇರೆಡೆ ಬಿಡಲು ಯತ್ನಿಸಿದ್ದ ವ್ಯಕ್ತಿಯೋರ್ವ ಹಾವು ಕಚ್ಚಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶಿಗ್ಗಾವಿ ತಾಲೂಕಿನ ತಡಸ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ರಾಜು ಕೌದಿ ಮೃತ ದುರ್ದೈವಿಯಾಗಿದ್ದು, ಯಾವುದೇ ಮುನ್ನೆಚ್ಚರಿಕೆ ಇಲ್ಲದೆ ಹಾವು ಹಿಡಿಯಲು ಯತ್ನಿಸಿದ್ದ ಸಂದರ್ಭದಲ್ಲಿ ದುರ್ಘಟನೆ ನಡೆದಿದೆ.
ರಾಜು ಕೌದಿ ನಾಗರಹಾವನ್ನು ಸೆರೆ ಹಿಡಿಯಲು ಯತ್ನಿಸಿದ ಘಟನೆಯನ್ನು ಸ್ಥಳೀಯರು ವಿಡಿಯೋ ಕೂಡ ಮಾಡಿದ್ದಾರೆ. ವಿಡಿಯೋದಲ್ಲಿ ಕೇವಲ ಒಂದು ಕೋಲು ಹಿಡಿದು ಹಾವನ್ನು ಹಿರಿಯಲು ರಾಜು ಯತ್ನಿಸಿದ್ದಾರೆ.
ಆದರೆ ಪದೇ ಪದೆ ಕೋಲಿನಿಂದ ಹಾವಿನ ತಲೆಯನ್ನು ಒತ್ತಿ ಹಿಡಿಯಲು ಯತ್ನಿಸಿದ್ದು, ಈ ವೇಳೆ ಹಾವು ಕೂಡ ಆತಂಕಗೊಂಡಿದೆ. ಈ ಹಂತದಲ್ಲಿ ಹಾವಿನ ತಲೆ ಮೇಲೆ ಕೋಲಿನಿಂದ ಒತ್ತಿ ಹಿಡಿದ ರಾಜು, ಕೈಯಲ್ಲಿ ತಲೆಯನ್ನು ಹಿಡಿದುಕೊಳ್ಳಲು ಯತ್ನಿಸಿದರು. ಆದರೆ ಕೈ ಜಾರಿದ ಪರಿಣಾಮ ಹಾವು ಅವರ ಕೈಗೆ ಕಚ್ಚಿ ಗಾಯಗೊಳಿಸಿತ್ತು. ಕೂಡಲೇ ಹಾವನ್ನು ನೆಲಕ್ಕೆ ಎಸೆದ ಅವರು ದೂರ ಸರಿದಿದ್ದಾರೆ. ಕೂಡಲೇ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕೀಮ್ಸ್ ಗೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.




