ದಿಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕಿ ಆತಿಶಿ ಸೇರಿದಂತೆ ಆಪ್ ಪಕ್ಷದ 12 ಶಾಸಕರು ವಿಧಾನಸಭೆಯಿಂದ ಅಮಾನತು
ನವದೆಹಲಿ: ದಿಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕಿ ಆತಿಶಿ ಸೇರಿದಂತೆ ಪ್ರತಿಪಕ್ಷದ 12 ಶಾಸಕರನ್ನು ವಿಧಾನಸಭೆಯಿಂದ ಒಂದು ದಿನದ ಮಟ್ಟಿಗೆ ಅಮಾನತುಗೊಳಿಸಲಾಗಿದೆ.
ದಿಲ್ಲಿ ವಿಧಾನಸಭೆಯ ಅಧಿವೇಶನ ಆರಂಭವಾಗುತ್ತಿದ್ದಂತೆ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಸದನವನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಅವರ ಭಾಷಣಕ್ಕೆ ಆಪ್ ಶಾಸಕರು ವಿರೋಧ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿದರು. ಇದರಿಂದಾಗಿ ಸ್ಪೀಕರ್ ವಿಜೇಂದರ್ ಗುಪ್ತಾ ಅವರು ಶಾಸಕರನ್ನು ಒಂದು ದಿನದ ಮಟ್ಟಿಗೆ ಅಮಾನತುಗೊಳಿಸಿದ್ದಾರೆ.
ಆತಿಶಿ, ಗೋಪಾಲ್ ರಾಯ್, ವೀರ್ ಸಿಂಗ್ ಧಿಂಗನ್, ಮುಖೇಶ್ ಅಹ್ಲಾವತ್, ಚೌಧರಿ ಝುಬೇರ್ ಅಹ್ಮದ್, ಅನಿಲ್ ಝಾ, ವಿಶೇಷ್ ರವಿ ಮತ್ತು ಜರ್ನೈಲ್ ಸಿಂಗ್ ಸೇರಿದಂತೆ ಆಪ್ ಪಕ್ಷದ 12 ಶಾಸಕರನ್ನು ಅಮಾನತುಗೊಳಿಸಲಾಗಿದೆ.
ಮುಖ್ಯಮಂತ್ರಿ ಕಚೇರಿಯಲ್ಲಿದ್ದ ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ತೆಗೆಯುವ ಮೂಲಕ ಬಿಜೆಪಿಯವರು ಅಗೌರವ ತೋರಿದ್ದಾರೆ ಎಂದು ಆತಿಶಿ ಆರೋಪಿಸಿದ್ದಾರೆ.




