ಸುಳ್ಯ: ಎಣ್ಮೂರು ಶೌಚಾಲಯದ ಗೋಡೆ ದುರಸ್ತಿ ಮಾಡುತ್ತಿದ್ದ ವೇಳೆ ಗೋಡೆ ಕುಸಿತ:
ಇಬ್ಬರು ಮಹಿಳೆಯರು ಮೃತ್ಯು
ಸುಳ್ಯ: ಶೌಚಾಲಯದ ಹಳೆಯ ಗೋಡೆಯನ್ನು ಕೆಡವುತ್ತಿದ್ದ ಸಂದರ್ಭದಲ್ಲಿ ಮಣ್ಣಿನ ಇಟ್ಟಿಗೆಯ ಗೋಡೆ ಮೈಮೇಲೆ ಕುಸಿದು ಬಿದ್ದು ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳೆಯರು ಮೃತಪಟ್ಟ ದಾರುಣ ಘಟನೆ ಇಂದು ಬೆಳಿಗ್ಗೆ ಎಣ್ಮೂರು ಗ್ರಾಮದ ನರ್ಲಡ್ಕದಿಂದ ವರದಿಯಾಗಿದೆ.
ನರ್ಲಡ್ಕ ನಿವಾಸಿ ಹರೀಶ ನಾಯ್ಕ ಎಂಬವರ ಮನೆಯ ಹಳೆಯ ಶೌಚಾಲಯದ ಗೋಡೆ ತೆರವುಗೊಳಿಸುವ ವೇಳೆ ಈ ದುರ್ಘಟನೆ ನಡೆದಿದೆ.
ಹಳೆಯ ಟಾಯ್ಲೆಟ್ ಗೋಡೆಯನ್ನು ತೆಗೆದು ಹೊಸ ಕಟ್ಟಡ ಕಟ್ಟುವುದಕ್ಕಾಗಿ ಕೆಲಸ ಮಾಡಲಾಗುತ್ತಿತ್ತು. ಇತರ ಕೆಲಸಗಾರರ ಜತೆ ಸಮೀಪದ ಮನೆಯ ಬೀಪಾತುಮ್ಮ ಮತ್ತು ನೆಬಿಸಾರವರು ಕಾಮಗಾರಿ ಕೆಲಸದಲ್ಲಿ ತೊಡಗಿದ್ದರು. ಆ ವೇಳೆ ಮಣ್ಣಿನ ಇಟ್ಟಿಗೆಯ ಗೋಡೆ ಇವರ ಮೇಲೆ ಕುಸಿದು ಬಿತ್ತು. ತಕ್ಷಣ ಅಲ್ಲಿದ್ದವರು ಇವರನ್ನು ಮಣ್ಣಿನ ರಾಶಿಯಿಂದ ಹೊರತೆಗೆದು ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಿದರು. ಆದರೆ ಕಾಣಿಯೂರು ತಲುಪುವಾಗ ಬೀಪಾತುಮ್ಮ(60 ) ರವರು ಕೊನೆಯುಸಿರೆಳೆದುದರಿಂದ ಅವರ ಮೃತ ದೇಹವನ್ನು ಹಿಂತಿರುಗಿ ನರ್ಲಡ್ಕಕ್ಕೆ ತರಲಾಗಿದೆ. ನೆಬಿಸರವರನ್ನು ಪುತ್ತೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಆಸ್ಪತ್ರೆ ತಲುಪುವ ವೇಳೆಗೆ ಅವರು ಕೊನೆ ಯುಸಿರೆಳೆದಿದ್ದರೆಂದು ತಿಳಿದುಬಂದಿದೆ.
ದುರಂತ ಸ್ಥಳಕ್ಕೆ ಬೆಳ್ಳಾರೆ ಎಸ್ ಐ ಆಂಜನೇಯರೆಡ್ಡಿ, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಅಬ್ದುಲ್ ಗಫೂರ್ ಕಲ್ಮಡ್ಕ ಮತ್ತಿತರರು ಹೋಗಿದ್ದು ಪರಿಹಾರ ಕಾರ್ಯದಲ್ಲಿ ನಿರತರಾಗಿದ್ದಾರೆ.





