ಮಂಗಳೂರು: ಕೊಲೆ ಪ್ರಕರಣ: ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟ
ಮಂಗಳೂರು: 31 ವರ್ಷದ ಶರಣಪ್ಪ ಎಂಬಾತನನ್ನು ಹತ್ಯೆಗೈದ ಆರೋಪಿಗಳಿಗೆ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಬಿಹಾರ ಮೂಲದ ಸನ್ನಿಬಾಬು ಮತ್ತು ಗಲ್ಲುರಾಮ ಯಾನೆ ಸಚಿನ್ ಯಾನೆ ನವೀನ್ ಶಿಕ್ಷೆಗೊಳಗಾದ ಅರೋಪಿಗಳು.
ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾರ್ನಾಡ್ ಗ್ರಾಮದ ವನಭೋಜನ ಎಂಬಲ್ಲಿ 2020ರ ಜನವರಿ 30ರಂದು ರಾತ್ರಿ 10ಕ್ಕೆ ಶರಣಪ್ಪ (31) ಎಂಬಾತನ ಕುತ್ತಿಗೆಗೆ ಚೂರಿಯಿಂದ ಚುಚ್ಚಿ ಕೊಲೆಗೈದಿದ್ದರು. ಶರಣಪ್ಪನು ಆರೋಪಿಗಳು ಮತ್ತವರ ಹೆತ್ತವರಿಗೆ ಅವಾಚ್ಯ ಶಬ್ದದಿಂದ ಬೈದಿದ್ದಾನೆ ಎಂದು ಕೋಪದಿಂದ ಈ ಕೃತ್ಯ ಎಸಗಿದ್ದರು.
ಅಂದಿನ ಮುಲ್ಕಿ ಠಾಣೆಯ ಇನ್ಸ್ಪೆಕ್ಟರ್ ಜಯರಾಮ್ ಗೌಡ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಎಸ್ಸೈ ಉಮೇಶ್ ತನಿಖೆಗೆ ಸಹಕರಿಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ಮೋತಿಲಾಲ್ ಚೌದರಿ ಅವರು ರಾಜ್ಯದ ವಾದವನ್ನು ಮಂಡಿಸಿ, ಶಿಕ್ಷೆಯನ್ನು ಖಚಿತಪಡಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಆರೋಪಿಗಳಿಗೆ ಸೆ.302 ಐಪಿಸಿ ಪ್ರಕಾರ ಜೀವಾವಧಿ ಶಿಕ್ಷೆ ಮತ್ತು ತಲಾ 10000 ದಂಡ, ಹಾಗೂ 34 1ಐಪಿಸಿ ಪ್ರಕಾರ 1 ತಿಂಗಳ ಸಾದಾ ಸಜೆ ಮತ್ತು ತಲಾ 500 ರೂ. ದಂಡ ವಿಧಿಸಿದ್ದಾರೆ. ನ್ಯಾಯಾಧೀಶ ಕಾಂತರಾಜ್ ಎಸ್ ವಿ ಅವರು ಡಿಸೆಂಬರ್ 20 ರಂದು ತೀರ್ಪು ನೀಡಿದ್ದಾರೆ.




