February 3, 2026

ಮಂಗಳೂರಿನಲ್ಲಿ ಪಿ ಎಫ್ ಐ ಎಸ್ಪಿ ಕಚೇರಿ ಚಲೋ ಪ್ರತಿಭಟನೆ:
ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದ ದ.ಕ ಎಸ್ಪಿ

0
Screenshot_20211217-174600_Chrome.jpg

ಮಂಗಳೂರು: ಉಪ್ಪಿನಂಗಡಿಯಲ್ಲಿ ಪೊಲೀಸ್ ಲಾಠಿಚಾರ್ಜ್ ಖಂಡಿಸಿ, ಪಿಎಫ್ಐ ಮತ್ತು ಎಸ್ ಡಿಪಿಐ ಸಂಘಟನೆ ಕಾರ್ಯಕರ್ತರು ಮಂಗಳೂರಿನಲ್ಲಿ ಪ್ರತಿಭಟನೆ ನೆಪದಲ್ಲಿ ಭಾರೀ ಆಕ್ರೋಶ ಹೊರಹಾಕಿದ್ದಾರೆ.

ಮೆರವಣಿಗೆ ನಡೆಸುವಂತಿಲ್ಲ ಎಂಬ ಪೊಲೀಸ್ ಕಮಿಷನರ್ ನಿರ್ಬಂಧ ಹಿನ್ನೆಲೆಯಲ್ಲಿ ಸಾವಿರಾರು ಕಾರ್ಯಕರ್ತರು ಹಂಪನಕಟ್ಟೆಯ ಕ್ಲಾಕ್ ಟವರ್ ಮುಂದೆ ಸೇರಿದ್ದರು. ಮಧ್ಯಾಹ್ನ 3 ಗಂಟೆಯಿಂದಲೇ ಆಸುಪಾಸಿನಲ್ಲಿ ವಾಹನ ನಿಲ್ಲಿಸಿ, ಒಂದೆಡೆ ಸೇರಿದ ಕಾರ್ಯಕರ್ತರು ಪೊಲೀಸರಿಗೆ ಧಿಕ್ಕಾರ ಕೂಗಿದ್ದಾರೆ.

ಉಪ್ಪಿನಂಗಡಿ ಪೊಲೀಸರ ವಿರುದ್ಧ ಧಿಕ್ಕಾರದ ಘೋಷಣೆ ಕೂಗುತ್ತಲೇ ಲಾಠಿಚಾರ್ಜ್ ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ಈ ನೆಲದ ಕಾನೂನು ಗೌರವಿಸುತ್ತೇವೆ. ಆದರೆ, ಪೊಲೀಸರು ನಮ್ಮ ಮೇಲೆ ತಾರತಮ್ಯ ಧೋರಣೆ ಅನುಸರಿಸಿದರೆ ಸುಮ್ಮನಿರಲ್ಲ. ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರೂ, ನೀವು ನಮ್ಮ ಮೇಲೆ ಲಾಠಿಚಾರ್ಜ್ ಮಾಡಿದ್ದೀರಿ.. ಅಲ್ಲದೆ, ವಿನಾಕಾರಣ ಮಾನಭಂಗ, ಚೂರಿ ಇರಿತದ ಕತೆಕಟ್ಟಿ ಕೇಸು ಹಾಕಿದ್ದೀರಿ. ನಿಮ್ಮ ವಿರುದ್ಧ ನಾವು ಕ್ರಾಂತಿಯ ಕಹಳೆ ಊದಿದ್ದೇವೆ. ಇದು ಅಂತ್ಯ ಅಲ್ಲ, ಆರಂಭ. ನಿಮ್ಮ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ. ಕಟಕಟೆಗೆ ನಿಲ್ಲಿಸಿ, ನಿಮ್ಮನ್ನು ಬೆತ್ತಲು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನೆಯಲ್ಲಿ ಭಾಷಣ ಮಾಡಿದ ಎಸ್ ಡಿಪಿಐ ಮುಖಂಡ ಶಾಫಿ ಬೆಳ್ಳಾರೆ, ಬಜರಂಗದಳ, ಇನ್ನಿತರ ಸಂಘಟನೆಯ ನಾಯಕರು, ಕಾರ್ಯಕರ್ತರ ಮೇಲೆ ಎತ್ತದ ಲಾಠಿಯನ್ನು ಮೇಲೆ ನಮ್ಮ ಸಮುದಾಯದ ಮೇಲೆ ಎತ್ತಿದ್ದೀರಿ. ನೀವು ಮಾಡುತ್ತಿರುವ ತಾರತಮ್ಯ ನೀತಿಯಿಂದಾಗಿ ನಮ್ಮ ಯುವಕರು ಆಕ್ರೋಶಕ್ಕೀಡಾಗಿದ್ದಾರೆ. ನಮ್ಮ ಜಿಲ್ಲೆಯ ಠಾಣೆಯ ಇನ್ಸ್ ಪೆಕ್ಟರ್, ಎಸ್ಐಗಳ ರಾಜಭಾರದಿಂದಾಗಿ ನ್ಯಾಯ ಮರೀಚಿಕೆಯಾಗಿದೆ. ನ್ಯಾಯ ಕೇಳಲು ಹೋದವರನ್ನೇ ಜೈಲಿಗಟ್ಟುವ ಕೆಲಸ ಮಾಡುತ್ತಿದ್ದಾರೆ. ಇಂಥ ಅಧಿಕಾರಿಗಳಿಂದಾಗಿ ನಾವು ನ್ಯಾಯಕ್ಕಾಗಿ ಪ್ರತಿಭಟಿಸುವ ಅನಿವಾರ್ಯತೆಗೆ ಬಂದಿದ್ದೇವೆ. ನಿಮ್ಮ ಸಂಘ ಪರಿವಾರದ ಪರ ನಿಲುವು ನಮ್ಮನ್ನು ಬೀದಿಗೆ ತಂದು ನಿಲ್ಲಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಐದು ಸಾವಿರಕ್ಕೂ ಹೆಚ್ಚು ಯುವಕರು ಪ್ರತಿಭಟನೆಯಲ್ಲಿ ಸೇರಿದ್ದು, ಮೂರು ಗಂಟೆಯಿಂದ 5 ಗಂಟೆ ವರೆಗೆ ನಿರಂತರ ಪೊಲೀಸರ ವಿರುದ್ಧ ಘೋಷಣೆ ಕೂಗಿದರು. ಇದೇ ವೇಳೆ, ಉಪ್ಪಿನಂಗಡಿ ಲಾಠಿಚಾರ್ಜ್ ಪ್ರಕರಣದಲ್ಲಿ ಬಂಧಿತರಾದವರನ್ನು ಬಿಡುಗಡೆ ಮಾಡಬೇಕು. ಅವರ ವಿರುದ್ಧ ದಾಖಲಿಸಿದ ಕೇಸುಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಕೊನೆಗೆ, ಪೊಲೀಸ್ ಕಮಿಷನರ್ ಶಶಿಕುಮಾರ್ ಮತ್ತು ಎಸ್ಪಿ ಋಷಿಕುಮಾರ್ ಸೋನವಾಣೆ ಸ್ಥಳಕ್ಕಾಗಮಿಸಿ ಮನವಿ ಸ್ವೀಕರಿಸಿದರು. ಅಲ್ಲದೆ, ನಿಮ್ಮ ಮನವಿಯನ್ನು ಪರಿಗಣಿಸಿ ತನಿಖೆ ನಡೆಸುತ್ತೇವೆ. ಈಗಾಗಲೇ ಮೂರು ಎಫ್ಐಆರ್ ದಾಖಲಾಗಿದೆ. ಪರಿಶೀಲನೆ ನಡೆಸುತ್ತೇವೆ ಎಂದು ಇದೇ ಸಂದರ್ಭದಲ್ಲಿ ಎಸ್ಪಿ ಸೋನವಾಣೆ ಭರವಸೆ ನೀಡಿದರು.

Leave a Reply

Your email address will not be published. Required fields are marked *

error: Content is protected !!