ವಿಟ್ಲ: ಜನಪ್ರಿಯ ಸೆಂಟ್ರಲ್ ಸ್ಕೂಲ್ ನಲ್ಲಿ ವಾರ್ಷಿಕ ಕ್ರೀಡಾಕೂಟ-ಕ್ರೀಡೆ: ಮಕ್ಕಳಲ್ಲಿ ಮೊಬೈಲ್ ವ್ಯಾಮೋಹ ಕಡಿಮೆ ಮಾಡಬೇಕು: ವಿಟ್ಲ ಎಸೈ ವಿದ್ಯಾ ಕೆ.ಜೆ

ವಿಟ್ಲ: ಮಕ್ಕಳ ಸಂಭ್ರಮ ನೋಡೋಕೆ ಖುಷಿಯಾಗ್ತಿದೆ. ಸದೃಡ ಶರೀರ ಇದ್ದರೆ ಸದೃಡ ಮನಸ್ಸು ಇರಲು ಸಾಧ್ಯ. ಮಕ್ಕಳಿಗೆ ದೈಹಿಕ ಹಾಗೂ ಮಾನಸಿಕ ಖುಷಿ ಕ್ರೀಡೆಯಿಂದ ಸಿಗಲು ಸಾಧ್ಯ. ಈಗಿನ ಮಕ್ಕಳಿಗೆ ಮೊಬೈಲ್, ಟ್ಯಾಬ್ ಗಳು ಪ್ರಪಂಚವಾಗಿದೆ. ಮಕ್ಕಳಲ್ಲಿರುವ ಮೊಬೈಲ್ ವ್ಯಾಮೋಹ ಕಡಿಮೆ ಮಾಡಬೇಕು. ತಮ್ಮ ಮಕ್ಕಳಿಗೆ ಪೋಷಕರು ಸಮಯ ಕೊಡುವ ಕೆಲಸವಾಗಬೇಕಿದೆ. ಆಗ ಪೋಷಕರ ಮತ್ತು ಮಕ್ಕಳೊಳಗಿನ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತದೆ. ಈ ಸಂಸ್ಥೆಯಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿ ಕೊಳ್ಳುತ್ತಿರುವುದು ಸಂತಸದ ವಿಚಾರವಾಗಿದ್ದು, ಇದೊಂದು ಮಾದರಿ ವಿದ್ಯಾಸಂಸ್ಥೆ ಯಾಗಿದೆ ಎಂದು ವಿಟ್ಲ ಪೊಲೀಸ್ ಠಾಣಾ ಎಸ್.ಐ. ವಿದ್ಯಾ ಕೆ.ಜೆ. ಹೇಳಿದರು.


ಅವರು ನ.೩೦ರಂದು ಕಂಬಳಬೆಟ್ಟುವಿನಲ್ಲಿರುವ ಜನಪ್ರಿಯ ಸೆಂಟ್ರಲ್ ಸ್ಕೂಲ್ನಲ್ಲಿ ನಡೆದ ಮಕ್ಕಳ ವಾರ್ಷಿಕ ಕ್ರೀಡಾಕೂಟ ‘ಕ್ರೀಡೆ-2024’ ರ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.
ಮಂಗಳೂರು ತಾಲೂಕು ದೈಹಿಕ ಶಿಕ್ಷಣ ಅಧಿಕಾರಿ
ಲಿಲ್ಲಿ ಪಾಯಸ್ ರವರು ಮಾತನಾಡಿ ಇಲ್ಲಿ ಮಕ್ಕಳಿಗೆ ಪೂರಕವಾದ ವಾತಾವರಣವಿದೆ. ಈ ಒಂದು ಸಣ್ಣ ಊರಿನ ಹೆಸರಿನ ಜನಪ್ರೀಯತೆಯನ್ನು ಬಹಳ ಎತ್ತರಕ್ಕೆ ಕೊಂಡೊಯ್ದ ಡಾ. ಅಬ್ದುಲ್ ಬಶೀರ್ ರವರ ಸಾಧನೆ ಅಭಿನಂದನೀಯ. ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡಿದಾಗ ಅವರು ಸಮಾಜದಲ್ಲಿ ಸತ್ಪ್ರಜೆಗಳಾಗಿ ಬೆಳಯಲು ಸಾಧ್ಯ. ಉತ್ತಮ ಜ್ಞಾನ ಮತ್ತು ನಡತೆ ಇದ್ದವರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.
ಯುನೈಟೆಡ್ ನೇಷನ್ಸ್ನ ರಾಷ್ಟ್ರೀಯ ಕಾರ್ಯದರ್ಶಿ, ಶಾಲಾ ಸಲಹೆಗಾರರಾದ ಡಾ. ರವಿ ಕುಮಾರ್ ಎಲ್.ಪಿ. ರವರು ಮಾತನಾಡಿ ಪ್ರತೀ ಮಕ್ಕಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪ್ರತಿಯೋರ್ವರನ್ನು ಇದರಲ್ಲಿ ಸೇರ್ಪಡೆ ಮಡಲಾಗಿದೆ. ನಿಮ್ಮೆಲ್ಲರ ಸಹಕಾರದಿಂದ ಇದೀಗ ನಮ್ಮ ಶಾಲೆ ಇಷ್ಟೊಂದು ಎತ್ತರಕ್ಕೆ ಬೆಳೆಯಲು ಸಾಧ್ಯವಾಗಿದೆ. ಇಲ್ಲಿನ ಆಡಳಿತ ಮಂಡಳಿ ಈ ಶಾಲೆಯನ್ನು ಕೇವಲ ಕಮರ್ಷಿಯಲ್ ದೃಷ್ಠಿಯಿಂದ ನೋಡದೆ ಊರಿನ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಹಂಬವನ್ನು ಹೊಂದಿದೆ. ಈ ಒಂದು ಗ್ರಾಮೀಣ ಭಾಗದಲ್ಲಿ ಆರ್ಥಿಕವಾಗಿ ಪ್ರಭಲವಲ್ಲದ ಜಾಗದಲ್ಲಿ ಶಾಲೆಯನ್ನು ಹುಟ್ಟು ಹಾಕುವ ಪ್ರಯತ್ನ ಯಾರೂ ಮಾಡಲ್ಲ. ಆದರೆ ಡಾ. ಅಬ್ದುಲ್ ಬಶೀರ್ ರವರು ತನ್ನ ಹುಟ್ಟೂರಿನಲ್ಲಿರುಯವ ತನ್ನ ತಂದೆಯ ಜಾಗದಲ್ಲಿ ಬಹಳಷ್ಟು ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಶಾಲೆಯನ್ನು ಹುಟ್ಟು ಹಾಕಿದ್ದಾರೆ. ಈ ಶಾಲೆಯ ಸದುಪಯೋಗವನ್ನು ಎಲ್ಲಾ ಜನರು ಪಡೆದುಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ವಿಟ್ಲ ಪೊಲೀಸ್ ಠಾಣಾ ಎಸ್.ಐ. ವಿದ್ಯಾ ಕೆ.ಜೆ. ಹಾಗೂ ಮಂಗಳೂರು ತಾಲೂಕು ದೈಹಿಕ ಶಿಕ್ಷಣ ಅಧಿಕಾರಿ ಲಿಲ್ಲಿ ಪಾಯಸ್ ರವರನ್ನು ಸನ್ಮಾನಿಸಲಾಯಿತು.
ಜನಪ್ರಿಯ ಫೌಂಡೇಶನ್ ನ ಅಧ್ಯಕ್ಷರಾದ ಡಾ. ಅಬ್ದುಲ್ ಬಶೀರ್ ವಿ.ಕೆ. ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಎಲ್ಲರ ಪರಿಶ್ರಮದಿಂದ ಜನಪ್ರಿಯ ಸ್ಕೂಲ್ ಅಭಿವೃದ್ಧಿ ಹೊಂದಿದೆ. ಇದೀಗ ನಮ್ಮ ಸಂಸ್ಥೆ ಸಿಬಿಎಸ್ ಗೆ ಸೇರ್ಪಡೆಯಾಗಿರುವುದು ಸಂತಸ ತಂದಿದೆ ಎಂದರು.
ಜನಪ್ರಿಯ ಶಾಲಾ ಅಧ್ಯಕ್ಷರಾದ ಫಾತಿಮ ನಸ್ರೀನಾ ಬಶೀರ್, ಜನಪ್ರಿಯ ಸೆಂಟ್ರಲ್ ಸ್ಕೂಲ್ ನ ನಿರ್ದೇಶಕರಾದ ನೌಶೀನ್ ಬದ್ರಿಯಾ, ಹಾಸನ ಜನಪ್ರಿಯ ಇನ್ಸ್ಟಿಟ್ಯೂಶನ್ ಆಫ್ ಹೆಲ್ತ್ ಸೈನ್ಸ್ ನ ಪ್ರಾಂಶುಪಾಲರಾದ ಪ್ರವೀಣ್ ಕುಮಾರ್ ಕೆ. ಸಾಮಾಜಿಕ ಕಾರ್ಯಕರ್ತ ರಹೀಂ ಕೊಪ್ಪ, ಶಾಕಿರ್ ಅಳಕೆಮಜಲು, ಶಾಲಾ ಪ್ರಾಂಶುಪಾಲರಾದ ಲಿಬಿನ್ ಕ್ಸೇವಿಯರ್, ಶಾಲಾ ಆಡಳಿತಾಧಿಕಾರಿ ಸಫ್ಘಾನ್ ಪಿಲಿಕಲ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ನಫೀಸಾ ಆಝಾ ಸ್ವಾಗತಿಸಿದರು. ವಿದ್ಯಾರ್ಥಿ ದಿಶಾನ್ ವಂದಿಸಿದರು. ಶಾಲಾ ವಿದ್ಯಾರ್ಥಿಗಳು ಕಾರ್ಯಕ್ರಮ ನಿರೂಪಿಸಿದರು.