ಕೇರಳದ ಬಿಜೆಪಿ ನಾಯಕ ಸಂದೀಪ್ ವಾರಿಯರ್ ಕಾಂಗ್ರೆಸ್ಗೆ ಸೇರ್ಪಡೆ
ಪಾಲಕ್ಕಾಡ್: ಕೇರಳದ ಬಿಜೆಪಿ ನಾಯಕ ಸಂದೀಪ್.ಜಿ ವಾರಿಯರ್ ಅವರು ಶನಿವಾರ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ. ಪಾಲಕ್ಕಾಡ್ ವಿಧಾನ ಸಭಾ ಕೇತ್ರದಲ್ಲಿ ಉಪಚುನಾವಣೆ ಎದುರಿಸಲು ಸಿದ್ಧವಾಗಿರುವ ಬಿಜೆಪಿಗೆ ಅದೇ ಕ್ಷೇತ್ರದ ಪ್ರಮುಖ ನಾಯಕರೊಬ್ಬರು ದಿಢೀರನೇ ಪಕ್ಷ ತೊರೆದಿರುವುದರಿಂದ ತೀವ್ರ ಮುಖಭಂಗವಾಗಿದೆ.
ಕಾಂಗ್ರೆಸ್ಗೆ ಸೇರ್ಪಡೆಗೊಂಡ ಬಳಿಕ ಪ್ರತಿಕ್ರಿಯಿಸಿದ ಸಂದೀಪ್, ‘ದ್ವೇಷಕೂಟದಿಂದ ಹೊರಬಂದು, ಪ್ರೀತಿಯ ಅಂಗಡಿಯ ಸದಸ್ಯನಾಗಿರುವುದು ಸಮಾಧಾನ ತಂದಿದೆ. ವಿವಿಧ ತನಿಖೆಗಳಿಂದ ತಪ್ಪಿಸಿಕೊಳ್ಳಲು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಸುರೇಂದ್ರನ್ ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಜೊತೆ ಒಳಒಪ್ಪಂದ ಮಾಡಿಕೊಂಡಿದ್ದಾರೆ. ಅದನ್ನು ವಿರೋಧಿಸಿದಕ್ಕಾಗಿ ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದರು’ ಎಂದು ಆರೋಪಿಸಿದ್ದಾರೆ.
ಸಂದೀಪ್ ಕಾಂಗ್ರೆಸ್ ಸೇರ್ಪಡೆಯ ಬಗ್ಗೆ ಪ್ರತಿಕ್ರಿಯಿಸಿದ ಸುರೇಂದ್ರನ್, ‘ಅಧಿಕಾರದ ಆಸೆಯಿಂದ ಸಂದೀಪ್ ಕಾಂಗ್ರೆಸ್ಗೆ ಸೇರಿದ್ದಾರೆ. ಇದರಿಂದ ಬಿಜೆಪಿಗೆ ಹಾನಿಯಾಗುವುದಿಲ್ಲ’ ಎಂದು ಹೇಳಿದ್ದಾರೆ.
ಸಂದೀಪ್ ಅವರನ್ನು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಕೆ.ಸುಧಾಕರನ್, ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕೇರಳ ಉಸ್ತುವಾರಿ ದೀಪ ದಾಸ್ಮುನ್ಶಿ ಅವರು ಪಕ್ಷಕ್ಕೆ ಬರಮಾಡಿಕೊಂಡರು.




