ವಿಕಲಾಂಗ ದಲಿತ ಯುವಕನ ಮೇಲೆ ಪೋಲಿಸರ ದೌರ್ಜನ್ಯ ಆರೋಪ:
ಅಮಾನವೀಯ ಕೃತ್ಯದ ವಿರುದ್ಧ ಪೋಲಿಸ್ ಠಾಣೆ ಚಲೋ ಎಚ್ಚರಿಕೆ
ಬೆಳ್ತಂಗಡಿ: ವಿಕಲಚೇತನ ದಲಿತ ಯುವಕನ ಮೇಲೆ ತುರ್ತು ಪೋಲಿಸ್ ವಾಹನದ ಸಿಬ್ಬಂದಿಗಳು ಏಕಾಏಕಿ ಹಲ್ಲೆ ನಡೆಸಿ, ದೌರ್ಜನ್ಯ ನಡೆಸಿರುವುದನ್ನು ನಲಿಕೆ ಸಮಾಜ ಸೇವಾ ಸಂಘ ಬೆಳ್ತಂಗಡಿ ತಾಲೂಕು ಸಮಿತಿ ಉಗ್ರವಾಗಿ ಖಂಡಿಸಿದೆ.
ಶಿಶಿಲ ಗ್ರಾಮದ ಗಿರೀಶ್ ಎಂಬಾತನ ಮೇಲೆ ಪೋಲಿಸ್ ದೌರ್ಜನ್ಯ ಅತ್ಯಂತ ಅಮಾನವೀಯವಾದುದು ಎಂದು ಸಂಘದ ಅಧ್ಯಕ್ಷ ಪ್ರಭಾಕರ ಎಸ್ ಶಾಂತಿಕೋಡಿ ಆರೋಪಿಸಿದ್ದಾರೆ.
ಜಮೀನಿನ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಪೋಲಿಸ್ ಹಿಂಸೆ ಅನಾಗರಿಕತೆಯ ಸಂಕೇತ. ಒಬ್ಬ ವಿಕಲಚೇತನ ದಲಿತ ಯುವಕನ ಮೇಲಿನ ದೌರ್ಜನ್ಯವನ್ನು ಸಹಿಸಲು ಸಾಧ್ಯವಿಲ್ಲ. ಆರೋಪಿತ ಪೋಲಿಸರ ಮೇಲೆ ಕ್ರಿಮಿನಲ್ ಕೇಸ್ ಹಾಕಿ, ತಕ್ಷಣ ಅವರನ್ನು
ಸೇವೆಯಿಂದ ಅಮಾನತು ಮಾಡಬೇಕು. ತಪ್ಪಿದಲ್ಲಿ ಜಿಲ್ಲೆಯ ವಿವಿಧ ದಲಿತ ಸಂಘಟನೆಗಳ ನೇತೃತ್ವದಲ್ಲಿ ಧರ್ಮಸ್ಥಳ ಪೋಲಿಸ್ ಠಾಣೆ ಚಲೋ ಎಂಬ ಉಗ್ರ ರೀತಿಯ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದವರು ಎಚ್ಚರಿಸಿದ್ದಾರೆ.
ದಸಂಸ (ಅಂಬೇಡ್ಕರ್ ವಾದ) ರಾಜ್ಯ ಸಂಘಟನಾ ಸಂಚಾಲಕ ಚಂದು ಎಲ್, ಮೈಸೂರು ವಿಭಾಗ ಸಂಘಟನಾ ಸಂಚಾಲಕ ಬಿ.ಕೆ ವಸಂತ, ದಲಿತ ಹಕ್ಕುಗಳ ಸಮಿತಿ ಅಧ್ಯಕ್ಷ ಶೇಖರ್ ಲಾಯಿಲ, ನಲಿಕೆ ಸಮಾಜ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ ಶಾಂತಿಗೋಡು, ಮಾಜಿ ಅಧ್ಯಕ್ಷ ಸೇಸಪ್ಪ ಅಳದಂಗಡಿ, ದಲಿತ ಸೇವಾ ಸಮಿತಿ ಸ್ಥಾಪಕ ಅಧ್ಯಕ್ಷ ಸೇಸಪ್ಪ ಬೆದ್ರಕಾಡು, ದಲಿತ ನಾಯಕರಾದ ಅನಂತ ಮುಂಡಾಜೆ, ಹರೀಶ್ ಕುಮಾರ್ ಎಲ್, ಸುಂದರ ಎಸ್ಎಂಟಿ, ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಸುಂದರ ಪಾಟಾಜೆ ಸೇರಿದಂತೆ ಹಲವಾರು ದಲಿತ ನಾಯಕರು ಆಸ್ಪತ್ರೆಗೆ ಭೇಟಿ ನೀಡಿದರು. ಬಳಿಕ ಬೆಳ್ತಂಗಡಿ ತಾಲೂಕಿನ ಭೇಟಿಯಲ್ಲಿದ್ದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಿದರು.







