December 19, 2025

ಬೈಕ್ ಕೊಡಿಸಲು ನಿರಾಕರಿಸಿದ್ದಕ್ಕೆ ಮನನೊಂದು ಪದವಿ ವಿದ್ಯಾರ್ಥಿ ಆತ್ಮಹತ್ಯೆ

0
image_editor_output_image-1485927579-1726292960020.jpg

ಬೆಂಗಳೂರು: ತಾಯಿ ತನಗೆ ಹೊಸ ಬೈಕ್ ಕೊಡಿಸಲು ನಿರಾಕರಿಸಿದ್ದಕ್ಕೆ ಮನನೊಂದ 20 ವರ್ಷದ ಪದವಿ ವಿದ್ಯಾರ್ಥಿಯೊಬ್ಬ ಬುಧವಾರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೃತನನ್ನು ಅಯ್ಯಪ್ಪ ಎಂದು ಗುರುತಿಸಲಾಗಿದ್ದು, ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ.

ತಮಿಳುನಾಡು ಮೂಲದ ಕುಟುಂಬ ಥಣಿಸಂದ್ರದಲ್ಲಿ ನೆಲೆಸಿತ್ತು. ಆರು ವರ್ಷಗಳ ಹಿಂದೆ ತಂದೆ ತೀರಿಕೊಂಡ ನಂತರ ಯುವಕನ ತಾಯಿ ಹೌಸ್ ಕೀಪಿಂಗ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಹಣಕಾಸಿನ ಅಡಚಣೆಯಿಂದಾಗಿ, ಅವನಿಗೆ ಬೈಕ್ ಪಡೆಯಲು ಸಾಧ್ಯವಾಗಲಿಲ್ಲ ಮತ್ತು ಸ್ವಲ್ಪ ಸಮಯ ಕಾಯುವಂತೆ ಆತನ ತಾಯಿ ಹೇಳಿದ್ದರು. ಗೆಳೆಯರೆಲ್ಲ ಕಾಲೇಜಿಗೆ ಬೈಕ್‌ನಲ್ಲಿ ಬರುತ್ತಿದ್ದರಿಂದ ತನಗೂ ಕೂಡ ಬೈಕ್ ಕೊಡಿಸುವಂತೆ ತಾಯಿಯನ್ನು ಒತ್ತಾಯಿಸುತ್ತಿದ್ದ. ಆದರೆ, ಬೈಕ್‌ ಕೊಡಿಸಲು ಆಕೆ 50 ಸಾವಿರ ರೂಪಾಯಿ ವ್ಯವಸ್ಥೆ ಮಾಡಿದ್ದಾಳೆ ಎಂಬುದು ಆತನಿಗೆ ತಿಳಿದಿರಲಿಲ್ಲ.

ಬೆಳಗ್ಗೆ 6 ಗಂಟೆಗೆ ತಾಯಿ ಕೆಲಸಕ್ಕೆ ತೆರಳಿದಾಗ ಅಯ್ಯಪ್ಪ ಮನೆಯಲ್ಲಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸಂಜೆ 4.30ಕ್ಕೆ ಮನೆಗೆ ಹಿಂತಿರುಗಿ ನೋಡಿದಾಗ ಮಗ ಚಾವಣಿಗೆ ನೇಣು ಬಿಗಿದುಕೊಂಡಿರುವುದು ಕಂಡಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಅಂಬೇಡ್ಕರ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಮಹಿಳೆಯ ಮತ್ತೊಬ್ಬ ಮಗಳು ಮದುವೆಯಾಗಿ ಗಂಡನ ಮನೆಯಲ್ಲಿ ವಾಸವಾಗಿದ್ದಾಳೆ. ಹೆಣ್ಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!