ಪುತ್ತೂರು: ಕೊಂಬೆಟ್ಟು ಶಾಲಾ ಮುಸ್ಲಿಂ ವಿದ್ಯಾರ್ಥಿನಿಗೆ ಚೂರಿ ಇರಿತ ಪ್ರಕರಣ: ಶಾಲಾ ಪ್ರಾಂಶುಪಾಲನಿಂದ ತಪ್ಪು ಮಾಹಿತಿ ನೀಡಿ: ಸಾರ್ವಜನಿಕ ವಲಯಗಳಲ್ಲಿ ವ್ಯಾಪಕ ಆಕ್ರೋಶ
ಪುತ್ತೂರು: ಕೊಂಬೆಟ್ಟು ಶಾಲಾ ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳಿಗೆ ವಿದ್ಯಾರ್ಥಿಯೋರ್ವ ಚೂರಿಯಿಂದ ಇರಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.
ಗಾಯಗೊಂಡ ವಿದ್ಯಾರ್ಥಿಯನ್ನು ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ತೆರಳಿದ ಪುತ್ತೂರು ಪೊಲೀಸರು ಸಿ ಸಿ ಟಿವಿ ಪರಿಶೀಲನೆ ನಡೆಸಿದ್ದು, ಚೂರಿ ಇರಿದ ಶಾಲಾ ವಿದ್ಯಾರ್ಥಿ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಯಾವ ಕಾರಣಕ್ಕೆ ಚೂರಿ ಇರಿಯಲಾಗಿದೆ ಎಂಬ ವಿಚಾರ ಇನ್ನಷ್ಟೇ ತಿಳಿದುಬರಬೇಕಿದೆ.
ವಿದ್ಯಾರ್ಥಿನಿಯ ಕೈಯಲ್ಲಿ ರಕ್ತ ಬರುವುದನ್ನು ಗಮನಿಸಿದ ಅದೇ ಶಾಲಾ ಪ್ರಾಂಶುಪಾಲ ಕೈಗೆ ಗ್ಲಾಸು ಬಿದ್ದು ಗಾಯಗೊಂಡಿದೆ ಎಂದು ತಪ್ಪು ಮಾಹಿತಿ ನೀಡಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಕಳುಹಿಸಿ ಕೊಟ್ಟಿದ್ದಾರೆ. ಆರೋಪಿ ಶ್ರೀಜಿತ್ ಇರಿದಿದ್ದಾನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಸಂತ್ರಸ್ತೆ ವಿದ್ಯಾರ್ಥಿನಿ ಹೇಳಿದ್ದಾಳೆ.
ಕೊಂಬೆಟ್ಟು ಕಾಲೇಜಿನಿಂದ ಪುತ್ತೂರು ಮುಖ್ಯ ಆಂಚೆ ಕಚೇರಿ ಯನ್ನು ಸಂಪರ್ಕಿಸುವ ರಸ್ತೆಯಲ್ಲಿ ಕಾಲೇಜ್ ವಿದ್ಯಾರ್ಥಿಗಳು ಬರುತ್ತಿರುವ ವೇಳೆ ಶ್ರೀಮಹಾಲೀಂಗೇಶ್ವರ ದೇವಸ್ಥಾನದ ಮುಂಭಾಗ ಘಟನೆ ನಡೆದಿದೆ. ವಿದ್ಯಾರ್ಥಿನಿ ಹಾಗೂ ವಿದ್ಯಾರ್ಥಿ ಬೇರೆ ಬೇರೆ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಎರಡು ಸಮುದಾಯದ ಯುವಕರು ಆಸ್ಫತ್ರೆಯ ಮುಂಭಾಗ ಜಮಾಯಿಸಿದ್ದಾರೆ.
ಇದೀಗ ನೈಜ ಘಟನೆ ಬೆಳಕಿಗೆ ಬರುತ್ತಿದ್ದಂತೆ ಪ್ರಾಂಶುಪಾಲರ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.




