ವಿಟ್ಲ: ಕಲ್ಲು ಕೋರೆಗಳಿಂದ ತೋಟಗಳಿಗೆ ಕಲುಷಿತ ನೀರು: ರೈತರಿಂದ ಗ್ರಾ.ಪಂ ಮುಂಭಾಗ ಪ್ರತಿಭಟನೆ
ವಿಟ್ಲ: ಕಪ್ಪು ಕಲ್ಲಿನ ಕೋರೆಯಿಂದ ತ್ಯಾಜ್ಯವನ್ನು ನೀರಿನ ಮೂಲಕ್ಕೆ ಬಿಟ್ಟಿದ್ದು, ಸ್ಥಳೀಯಾಡಳಿತ ಈ ನಿಟ್ಟಿನಲ್ಲಿ ಸೂಕ್ತ ಎಚ್ಚರಿಕೆಯನ್ನು ವಹಿಸಿಲ್ಲ. ಮಳೆಯ ನೀರಿನ ಜತೆಗೆ ಖಾಸಗೀ ಜಮೀನುಗಳಿಗೆ ಕಲ್ಲಿನ ಹುಡಿ ನುಗ್ಗಿ ಕೃಷಿ ಹಾನಿಯಾಗಿದೆ. ಈ ನಿಟ್ಟಿನಲ್ಲಿ ಕುಳ ಭಾಗದ ಗ್ರಾಮಸ್ಥರು ಇಡ್ಕಿದು ಗ್ರಾಮ ಪಂಚಾಯಿತಿ ಮುಂಭಾಗ ಪ್ರತಿಭಟನೆಯನ್ನು ನಡೆಸಿದರು.
ಕುಳ ಗ್ರಾಮದಲ್ಲಿರುವ ಹಲವು ಕೃಷಿಕರ ತೋಟಗಳಿಗೆ ಕಲ್ಲು ಕೋರೆಯಿಂದ ಕ್ರಷರ್ ಮಿಶ್ರಿತ ಕಲುಷಿತ ನೀರು ತೋಟಗಳಿಗೆ ನುಗ್ಗುತ್ತಿದೆ. ಇದರಿಂದ ರೈತರ ಫಲವತ್ತದ ತೆಂಗು, ಹಾಗೂ ಭತ್ತದ ಕೃಷಿಗೆ ಹಾನಿಯಾಗುತ್ತಿದೆ. ಕೃಷಿ ಭೂಮಿಯ ಮಣ್ಣು ನಾಶಹೊಂದಿ ಕಲ್ಲಿನ ಹುಡಿ ನಮ್ಮ ತೋಟಕ್ಕೆ ಸೇರಿಕೊಂಡಿದೆ ಈ ಬಗ್ಗೆ ಹಲವು ಬಾರಿ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಉಪತಹಸೀಲ್ದಾರ ವಿಜಯ ವಿಕ್ರಮ, ಗ್ರಾಮ ಕರಣಿಕರಾದ ಕೃತಿಕಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೋಕುಲ್ ದಾಸ್ ಭಕ್ತ ರೈತರ ಮನವಿ ಸ್ವೀಕರಿಸಿ ಮನವೊಲಿಸುವ ಪ್ರಯತ್ನ ಮಾಡಿದರು.
ಕೃಷಿಕರಿಗೆ ಆಗಿರುವ ನಷ್ಟ ಸೂಕ್ತ ಪರಿಹಾರವನ್ನು ಕೊಡಿಸುವ ಭರವಸೆಯನ್ನು ಅಧಿಕಾರಿ ವರ್ಗ ನೀಡಿದೆ. ಕೃಷಿ ಭೂಮಿಗೆ ಆಗಿರುವ ಸಮಸ್ಯೆಯನ್ನು ಸರಿ ಪಡಿಸಿ ಅದರ ವೆಚ್ಚದ ಮಾಹಿತಿಯನ್ನು ಪಂಚಾಯಿತಿ ಅಭಿವೃದ್ಧಿಗೆ ನೀಡಿದಲ್ಲಿ ಪರಿಹಾರವನ್ನು ಕೊಡಿಸುವ ಭರವಸೆಯನ್ನು ನೀಡಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.
ರೈತ ಸಂಘ ಜಿಲ್ಲಾಧ್ಯಕ್ಷ ರೂಪೇಶ್ ರೈ ಅಲಿಮಾರು, ಕಾರ್ಯದರ್ಶಿ ಇಬ್ರಾಹಿಂ ಖಲೀಲ್, ಕಾಂಗ್ರೆಸ್ ಪಕ್ಷದ ಮುಖಂಡರಾದ ಮುರಳೀಧರ ರೈ ಮಠಂತಬೆಟ್ಟು, ರಾಜಾರಾಮ ಕೆ.ಬಿ., ಸುಶಾಂತ್ ಶೆಟ್ಟಿ ಕಂಬಳಬೆಟ್ಟು, ಸುಮಿತ್ ಶೆಟ್ಟಿ ಕಂಬಳಬೆಟ್ಟು, ಮೋಹನ್ ಗುರ್ಜಿನಡ್ಕ, ಕೇಶವ ಕೊಡಿಪ್ಪಾಡಿ, ಚೇತನ್ ಓಜಾಲ, ಅಶ್ರಫ್ ಅಳಕೆಮಜಲು, ಪ್ರವೀಣ್ ಕುಮಾರ್ ಶೆಟ್ಟಿ ಅಳಕೆಮಜಲು, ಶಾಕೀರ್ ಅಳಕೆಮಜಲು ಬೈಲು, ಭಾತೀಷ್ ಅಳಕೆಮಜಲು, ಸಂತ್ರಸ್ತ ರೈತರಾದ ಈಶ್ವರ ಪೂಜಾರಿ ಕುಳ, ಭಾರತೀ ರೈ, ಮೊಯಿದು ಕುಂಞ ಅಂತರಗುತ್ತು, ಇಸ್ಮಾಯಿಲ್ ಅಂತರಗುತ್ತು, ಅಬೂಬಕ್ಕರ್ ಕಟ್ಟ, ಗಣೇಶ್ ಪೂಜಾರಿ ಅಂಗಡಿ ಮಜಲು, ಕರುಣಾಕರ ಕಟ್ನಾಜೆ, ದಾಮೋದರ ಪೂಜಾರಿ ಹೊಸಮಾರು ಭಾಗವಹಿಸಿದ್ದರು.