ರಾಜ್ಯದಲ್ಲಿ ನೈಟ್, ವೀಕೆಂಡ್ ಕರ್ಫ್ಯೂ ಇಲ್ಲ:
ಸಭೆ ಸಮಾರಂಭಕ್ಕೆ ಬ್ರೇಕ್ ಸಾಧ್ಯತೆ: ಸಿ.ಎಂ ಬಸವರಾಜ್ ಬೊಮ್ಮಾಯಿ ಹೇಳಿಕೆ
ಮಂಗಳೂರು: ಸದ್ಯಕ್ಕೆ ನೈಟ್ ಕರ್ಫ್ಯೂ ಹಾಗೂ ಕಠಿಣ ನಿರ್ಬಂಧಗಳು ಜಾರಿಗೊಳಿಸುವುದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸಂಪುಟ ಸಭೆಯ ಬಳಿಕ ಮಾತನಾಡಿದ ಅವರು, ಸದ್ಯಕ್ಕೆ ನೈಟ್ ಕರ್ಫ್ಯೂ ಕೂಡ ಇಲ್ಲ ಬದಲಾಗಿ ಒಂದು ವಾರದ ಬೆಳವಣಿಗೆ ಗಮನಿಸಿ ಬಳಿಕ ನಿರ್ಧಾರ ಮಾಡ್ತೇವೆ ಎಂದರು.
ವಸತಿ ನಿಲಯಗಳಲ್ಲಿ ಸೋಂಕು ಪತ್ತೆ ವಿಚಾರವಾಗಿ ಮಾತನಾಡಿ, ಹಾಸ್ಟೆಲ್ ಗಳಿಗೆ ವಿಶೇಷ ಮಾರ್ಗಸೂಚಿ ಕೈಗೊಳ್ಳಲಾಗಿದೆ. ಒಂದೇ ಬಾರಿ ಎಲ್ಲರೂ ಊಟಕ್ಕೆ ಕೂರದಂತೆ ಸೂಚನೆ ನೀಡಲಾಗಿದೆ ಹಾಗೂ ವಾರ್ಡನ್, ಅಡುಗೆಯವರಿಗೆ 2 ಡೋಸ್ ಲಸಿಕೆ ಆಗಬೇಕು. ಐಸೋಲೇಶನ್ ರೂಂ ಮಾಡಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
3 ಜನರಿಗೆ ಬಂದ್ರೂ ಕ್ಲಸ್ಟರ್ ಅಂತ ನಿರ್ಧಾರ ಮಾಡಿದ್ದೇವೆ. ಕ್ಲಸ್ಟರ್ ಮ್ಯಾನೇಜ್ಮೆಂಟ್ಗೆ ಸೂಚನೆ ಕೊಟ್ಟಿದ್ದೇವೆ. ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಲು ನಿರ್ಧಾರ ಮಾಡಲಾಗಿದೆ ಎಂದರು. ಇನ್ನು ಗಡಿ ಭಾಗದಲ್ಲಿರುವ ಕಟ್ಟೆಚ್ಚರ ಮುಂದುವರೆಯಲಿದೆ.
ಕೇರಳ ವಿದ್ಯಾರ್ಥಿಗಳಿಗೆ ನಿರ್ಬಂಧ ಮುಂದುವರಿಯಲಿದೆ. ಆರ್ ಟಿಪಿಸಿಆರ್ ಟೆಸ್ಟ್ ಸೇರಿ ಇತರ ನಿರ್ಬಂಧಗಳು ಮುಂದುವರಿಯುತ್ತದೆ ಎಂದ ಅವರು ಒಂದು ವಾರದ ನಂತರ ಕ್ರಿಸ್ಮಸ್, ಹೊಸ ವರ್ಷಕ್ಕೆ ನಿಯಮಾವಳಿ ರೂಪಿಸುವ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದರು.
ಸಭೆ ಸಮಾರಂಭಕ್ಕೆ ಬ್ರೇಕ್ ಸಾಧ್ಯತೆ:
ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಪರಿಶೀಲಿಸಿ ಸರ್ಕಾರ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತದೆ. ನಾಳೆ ಅಥವಾ ನಾಡಿದ್ದು ಸರ್ಕಾರಕ್ಕೆ ಸಮಿತಿ ಶಿಫಾರಸು ಮಾಡುತ್ತದೆ. ಬಹುತೇಕ ಸಭೆ, ಸಮಾರಂಭ, ಮೆರವಣಿಗೆ, ಕಾರ್ಯಕ್ರಮಗಳು, ಹೊಸ ವರ್ಷಾಚರಣೆಗೂ ಈ ಬಾರಿ ಬ್ರೇಕ್ ಬೀಳುವ ಸಾಧ್ಯತೆಯಿದೆ.