February 3, 2026

ಮಡಿಕೇರಿ: ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್‌ಗೆ ವಿಷಕಾರಿ ರಾಸಾಯನಿಕ ಬೆರಕೆ

0
tap-water-364770942-1575106321.jpg

ಮಡಿಕೇರಿ: ಸುಂಟಿಕೊಪ್ಪದ ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್‌ಗೆ ದುಷ್ಕರ್ಮಿಗಳು ವಿಷಕಾರಿ ರಾಸಾಯನಿಕ ಬೆರೆಸಿದ್ದು, ಶಾಲಾ ಆಡಳಿತ ಮಂಡಳಿಯ ಸಮಯೋಚಿತ ಕ್ರಮದಿಂದ ಎಲ್ಲಾ ಮಕ್ಕಳ ಸುರಕ್ಷತವಾಗಿದ್ದಾರೆ.

ಈ ಸಂಬಂಧ ಶಾಲಾ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದ್ದು, ಸುಂಟಿಕೊಪ್ಪ ಪೊಲೀಸರು ಕಿಡಿಗೇಡಿಗಳ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ.

ಮಂಗಳವಾರ ಮಧ್ಯಾಹ್ನ ಶಾಲೆಯ ಶೌಚಾಲಯದಿಂದ ದುರ್ವಾಸನೆ ಬರುತ್ತಿದೆ ಎಂದು ಶಾಲಾ ಮಕ್ಕಳು ದೂರಿದ್ದಾರೆ. ತಕ್ಷಣ ಶಾಲೆಯ ಮುಖ್ಯಾಧ್ಯಾಪಕಿ ಗೀತಾ ಅವರು ಶಿಕ್ಷಕರೊಂದಿಗೆ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದಾಗ ನೀರಿನ ಓವರ್‌ಟ್ಯಾಂಕ್‌ನ ಮುಚ್ಚಳ ತೆರೆದಿದ್ದು, ಟ್ಯಾಂಕ್‌ನಿಂದ ದುರ್ವಾಸನೆ ಬರುತ್ತಿರುವುದು ಕಂಡು ಬಂದಿದೆ.

ಕೂಡಲೇ ಆಡಳಿತ ಮಂಡಳಿಯವರು ತಾಲೂಕು ಶಿಕ್ಷಣಾಧಿಕಾರಿ ಹಾಗೂ ಸುಂಟಿಕೊಪ್ಪ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಟ್ಯಾಂಕ್ ನೀರಿನಲ್ಲಿ ದುಷ್ಕರ್ಮಿಗಳು ವಿಷಕಾರಿ ರಾಸಾಯನಿಕ ಬೆರೆಸಿರುವುದು ಪತ್ತೆಯಾಗಿದೆ.

ಈ ನೀರನ್ನು ಅದೃಷ್ಟವಶಾತ್ ಶೌಚಾಲಯದ ಉದ್ದೇಶಕ್ಕೆ ಮಾತ್ರ ಬಳಸಲಾಗಿದ್ದು, ಯಾವ ವಿದ್ಯಾರ್ಥಿಯೂ ಸೇವಿಸಿಲ್ಲ. ಇದರಿಂದ ಶಾಲೆಯಲ್ಲಿ ಕಲಿಯುತ್ತಿರುವ ಸುಮಾರು 115 ವಿದ್ಯಾರ್ಥಿಗಳ ಅಪಾಯದಿಂದ ಪಾರಾಗಿದ್ದಾರೆ.

ಈ ಹಿಂದೆ ಕೆಲ ಕಿಡಿಗೇಡಿಗಳು ಶಾಲೆಯ ಆವರಣದಲ್ಲಿ ಇಟ್ಟಿದ್ದ ಪುಸ್ತಕಗಳನ್ನು ಸುಟ್ಟು ಹಾಕಿದ್ದರು ಎಂದು ತಿಳಿದುಬಂದಿದೆ. ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!