ಕಡಬ: ಬಸ್ ನಲ್ಲಿ ಯುವತಿಯ ಜೊತೆ ಅನುಚಿತ ವರ್ತನೆ: ಬಸ್ ನಿರ್ವಾಹಕನ ಬಂಧನ
ಕಡಬ: ಉಪ್ಪಿನಂಗಡಿಯಿಂದ ಕಡಬ ಮೂಲಕ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಬಸ್ ನಲ್ಲಿ ಯುವತಿಯ ಜೊತೆ ಅನುಚಿತ ವರ್ತನೆ ತೋರಿದ ಆರೋಪದಲ್ಲಿ ಬಸ್ ನಿರ್ವಾಹಕನ್ನು ಕಡಬ ಪೊಲೀಸರು ವಶಕ್ಕೆ ಪಡೆದ ಘಟನೆ ಶನಿವಾರ ನಡೆದಿದೆ.
ಕಡಬ ತಾಲೂಕು ರಾಮಕುಂಜ ಸಮೀಪದ ಕುಂಡಾಜೆ ಎಂಬ ಪ್ರದೇಶದಲ್ಲಿ ಯುವತಿ ಬಸ್ ಏರಿದ್ದರು.
ಆಲಂಕಾರಿಗೆ ಎಂದು ಯುವತಿ ಹೇಳಿದರೂ ಕಡಬಕ್ಕೆ ಟಿಕೆಟ್ ನೀಡಿರಲಿಲ್ಲ. ಬದಲಿಗೆ ಹೇಳಿದ ಸ್ಥಳದಲ್ಲಿ ನಿಲ್ಲಿಸದೆ ಕಡಬದತ್ತ ಬಸ್ ಹೊರಟಿತ್ತು ಎನ್ನಲಾಗಿದೆ. ತಾನು ಇಳಿಯುವ ಸ್ಥಳ ಬಂದಾಗ ಮೈಮುಟ್ಟಿ ಇಲ್ಲಿ ಇಳಿಯಬೇಡಿ ಎಂದು ನಿರ್ವಾಹಕ ಸೂಚಿಸಿದ್ದ ಎಂದೂ ಆರೋಪಿಸಲಾಗಿದೆ. ಬಸ್ ನಿಲ್ಲಿಸದೆ ಅನುಚಿತ ವರ್ತನೆ ತೋರಿದ ಬಗ್ಗೆ ಯುವತಿ ಪರಿಚಿತರಿಗೆ ಮಾಹಿತಿ ನೀಡಿದ ಹಿನ್ನೆಲೆ ಕಡಬ ಸಮೀಪದ ಕಳಾರ ಮಸೀದಿ ಬಳಿ ಬಸ್ ನ್ನು ಭೀಮ್ ಆರ್ಮಿ ಸಂಘಟನೆಯ ಸದಸ್ಯರು ತಡೆದು ನಿಲ್ಲಿಸಿದ್ದರು.
ಬಳಿಕ ಠಾಣೆ ಬಳಿ ನಿಲ್ಲಿಸಲು ಸೂಚಿಸಿದ್ದರು. ಆಲಂಕಾರಿನಲ್ಲಿ ಇಳಿಯುವ ವೇಳೆ ತನ್ನ ಮೈ ಮುಟ್ಟಿ ಇಲ್ಲಿ ಇಳಿಯಬೇಡಿ ಎಂದು ಒತ್ತಾಯ ಪೂರ್ವಕವಾಗಿ ಕಡಬದತ್ತ ಕರೆದುಕೊಂಡು ಬಂದಿರುವುದಾಗಿ ಯುವತಿ KA 21F3276 ಬಸ್ಸಿನ ನಿರ್ವಾಹಕನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕಡಬ ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಮುಂದಕ್ಕೆ ತೆರಳಲು ಪೊಲೀಸರು ಪರ್ಯಾಯವಾಗಿ ಬೇರೆ ಬಸ್ಸಿನ ವ್ಯವಸ್ಥೆ ಕಲ್ಪಿಸಿ ನಿರ್ವಾಹಕನ್ನು ಠಾಣೆಗೆ ಕರೆದೊಯ್ದಿದ್ದಾರೆ.
ನಂತರದ ಬೆಳವಣಿಗೆಯಲ್ಲಿ ಮುಚ್ಚಳಿಕೆ ಬರೆಸಿ ಮುಂದೆ ಪ್ರಯಾಣಿಕರ ಜೊತೆ ಸಭ್ಯತೆಯಿಂದ ವರ್ತಿಸುವಂತೆ ಎಚ್ಚರಿಕೆ ನೀಡಿರುವುದಾಗಿ ತಿಳಿದು ಬಂದಿದೆ.
ಅಲ್ಲದೇ, ಈ ಬಗ್ಗೆ ಕೆ ಎಸ್ ಆರ್ ಟಿ ಸಿ ಯ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸುವುದಾಗಿ ಅಧಿಕಾರಿಗಳು ಭರವಸೆ ನೀಡಿರುವುದಾಗಿ ತಿಳಿದು ಬಂದಿದೆ.





