ಪಕ್ಷದಿಂದ ಬೇಡುವುದಕ್ಕಿಂತ ಸಾಯುವುದೇ ಲೇಸು: ಶಿವರಾಜ್ ಸಿಂಗ್ ಚೌಹಾಣ್
ರಾಜಿನಾಮೆ ಸಲ್ಲಿಸಿದ ಮಾಜಿ ಮುಖ್ಯಮಂತ್ರಿ
ಮಧ್ಯಪ್ರದೇಶ: ಭಾರತೀಯ ಜನತಾ ಪಕ್ಷದ ಹೊಸ ಸಿಎಂ ಆಯ್ಕೆಯಾಗಿರುವ ಮೋಹನ್ ಯಾದವ್ ಗೆ ದಾರಿ ಮಾಡಿಕೊಡಲು ಮಧ್ಯಪ್ರದೇಶದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಒಂದು ದಿನದ ನಂತರ, ಶಿವರಾಜ್ ಚೌಹಾಣ್ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ.
ನನಗಾಗಿ ಏನನ್ನಾದರೂ ಪಕ್ಷದಿಂದ ಕೇಳುವ ಬದಲು ಸಾಯುವುದೇ ಮೇಲು ಎಂದು ಮಧ್ಯಪ್ರದೇಶದ ನಿರ್ಗಮಿತ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ. ಪಕ್ಷದಲ್ಲಿ ಉನ್ನತ ಹುದ್ದೆ ಕೇಳುವ ಯೋಚನೆ ಇದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಚೌಹಾಣ್, ‘ದೆಹಲಿಗೆ ಹೋಗಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ನನಗಾಗಿ ಏನನ್ನಾದರೂ ಕೇಳುವ ವ್ಯಕ್ತಿತ್ವ ನನ್ನದಲ್ಲ. ಇದು ನಾನು ಮಾಡುವ ಕೆಲಸವೇ ಅಲ್ಲ. ಬೇಕಾದರೆ ಸಾಯುತ್ತೇನೆ’ ಎಂದರು.
ಬಿಜೆಪಿ ಹಳೆಯ ನಾಯಕತ್ವ ಬದಲಾವಣೆ ಮಾಡಿದ್ದರಿಂದ ಮಧ್ಯಪ್ರದೇಶ ರಾಜಕೀಯದಲ್ಲಿ ಪಕ್ಷದ ವರಿಷ್ಠ ಶಿವರಾಜ್ ಚೌಹಾಣ್ ಅವರ ಭವಿಷ್ಯದ ಪಾತ್ರದ ಬಗ್ಗೆ ಪ್ರಶ್ನೆಗಳು ಮುಂಚೂಣಿಯಲ್ಲಿವೆ. ಮೋದಿ ಸರ್ಕಾರದಲ್ಲಿ ದೊಡ್ಡ ಪಾತ್ರಕ್ಕಾಗಿ ಕೇಂದ್ರ ನಾಯಕತ್ವವು ಚೌಹಾಣ್ ಅವರನ್ನು ದೆಹಲಿಗೆ ಕರೆತರುತ್ತದೆ ಎಂದು ಹೇಳಲಾಗಿತ್ತು. ಇಂತಹ ಊಹಾಪೋಹಗಳಿಗೆ ತೆರೆ ಎಳೆದ ಚೌಹಾಣ್, ಸಾಯುತ್ತೇನೆ ಹೊರತೂ ದೆಹಲಿಗೆ ಹೋಗುವುದಿಲ್ಲ ಎಂದು ರಾಜಕೀಯ ಭವಿಷ್ಯದ ಊಹಾಪೋಹಗಳ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ಬಿಜೆಪಿಯು ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದಕ್ಕಿಂತ ಸಂತೋಷ ಏನಿದೆ. 2023 ರಲ್ಲಿ ಮತ್ತೊಮ್ಮೆ ಬಿಜೆಪಿ ಭರ್ಜರಿ ಬಹುಮತದೊಂದಿಗೆ ಸರ್ಕಾರವನ್ನು ರಚಿಸಿದೆ ಎಂಬ ತೃಪ್ತಿ ಇದೆ. ನನ್ನ ಹೃದಯವು ಸಂತೋಷ ಮತ್ತು ತೃಪ್ತಿಯಿಂದ ತುಂಬಿದೆ ಎಂದು ಚೌಹಾಣ್ ಹೇಳಿದ್ದಾರೆ.




