ಉಡುಪಿ: ವ್ಯಕ್ತಿಗೆ ಚೂರಿಯಿಂದ ಇರಿದು ಕಲ್ಲಿನಿಂದ ಜಜ್ಜಿ ಹಲ್ಲೆ: ಇಬ್ಬರು ಆರೋಪಿಗಳ ಬಂಧನ
ಉಡುಪಿ: ವ್ಯಕ್ತಿಯೊಬ್ಬನಿಗೆ ಇಬ್ಬರು ಚೂರಿಯಿಂದ ಇರಿದು, ಕಲ್ಲಿನಿಂದ ಜಜ್ಜಿ ಹಲ್ಲೆ ನಡೆಸಿದ ಘಟನೆ ಕಾಪು ಸಮೀಪ ಮಲ್ಲಾರು ಅಚ್ಚಾಲ್ ರೈಲ್ವೇ ಬ್ರಿಡ್ಜ್ ಬಳಿ ಸಂಭವಿಸಿದ್ದು, ಆರೋಪಿ ಇಬ್ಬರನ್ನು ಬಂಧಿಸಲಾಗಿದೆ.
ಮಲ್ಲಾರು ಅಚ್ಚಾಲು ನಿವಾಸಿ ಅಬ್ದುಲ್ ಹಕೀಂ (42) ಹಲ್ಲೆಗೊಳಗಾಗಿ ಗಾಯಗೊಂಡ ವ್ಯಕ್ತಿ. ಮಹಮ್ಮದ್ ಫೈಜಲ್ ಮತ್ತು ರಶ್ವೀದ್ ಬಂಧಿತ ಆರೋಪಿಗಳು.
ಅಬ್ದುಲ್ ಹಕೀಂ ರವಿವಾರ ರಾತ್ರಿ ತನ್ನ ಮನೆ ಸಮೀಪದ ಮಲ್ಲಾರು ಅಚ್ಚಾಲ್ ರೈಲ್ವೇ ಬ್ರಿಡ್ಜ್ ಕೆಳಗಡೆ ಕುಳಿತುಕೊಂಡಿದ್ದ ವೇಳೆ ಅವರ ಹಿಂಬದಿಯಿಂದ ಬಂದ ಪರಿಚಿತ ಮಹಮ್ಮದ್ ಫೈಜಲ್ ಚೂರಿಯಿಂದ ಸೊಂಟ ಮತ್ತು ಬಲಗೈಗೆ ಚುಚ್ಚಿದ್ದು, ಆತನೊಂದಿಗಿದ್ದ ರಶ್ವೀದ್ ರೈಲ್ವೆ ಟ್ರ್ಯಾಕ್ ನಲ್ಲಿದ್ದ ಕಲ್ಲುಗಳನ್ನು ತೆಗೆದುಕೊಂಡು ತಲೆಗೆ ಜಜ್ಜಿ ಹಲ್ಲೆ ನಡೆಸಿದ್ದನು ಎಂದು ಆರೋಪಿಸಲಾಗಿದೆ.
ಮನೆ ಸಮೀಪವೇ ನಡೆದ ಘಟನೆಯನ್ನು ಕಂಡು ಹಕೀಂ ಅವರ ಪುತ್ರ ಮತ್ತು ಇತರರು ಸ್ಥಳಕ್ಕೆ ಧಾವಿಸಿದ್ದು,ಆಷ್ಟರಲ್ಲಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು.
ಕೂಡಲೇ ಸ್ಥಳೀಯರು ಸೇರಿ ಗಾಯಾಳುವನ್ನು ಚಿಕಿತ್ಸೆಗಾಗಿ ಉಡುಪಿ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದು ಅಲ್ಲಿನ ವೈದ್ಯರ ಶಿಫಾರಸ್ಸಿನ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.