ಮೂಲ್ಕಿ: ದರೋಡೆ, ಬೈಕ್ ಕಳವು ಪ್ರಕರಣ: ಸೊತ್ತುಗಳ ಸಹಿತ ಐವರು ಆರೋಪಿಗಳ ಬಂಧನ
ಮೂಲ್ಕಿ: ಮಹಿಳೆಯ ಕುತ್ತಿಗೆಯಿಂದ ಚಿನ್ನದ ಕರಿಮಣಿ ಸರ ಎಳೆದ ದರೋಡೆ ಪ್ರಕರಣ ಮತ್ತು ಚಂದ್ರ ಮೌಳೀಶ್ವರ ಬಸ್ ತಂಗುದಾಣದ ಬಳಿಯಿಂದ ಬೈಕ್ ಕಳವು ಮಾಡಿದ್ದ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಒಟ್ಟು ಐದು ಜನ ಅಂತರ್ ಜಿಲ್ಲಾ ಆರೋಪಿಗಳನ್ನು ಬಂಧಿಸಿ ಕಳವು ಮಾಡಿದ್ದ ಸೊತ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.
ದಾವಣಗೆರೆ ಮೂಲದ ರಘು ಎಸ್ (30), ಪ್ರಮೋದ್ ವಿ (23), ಎಚ್. ರವಿ ಕಿರಣ್ (23), ದಾವಲ ಸಾಬ್ ಎಚ್ (25) ಮತ್ತು ಮಂಜುನಾಥ (29) ಬಂಧಿತ ಆರೋಪಿಗಳು.
ರಾಷ್ಟ್ರೀಯ ಹೆದ್ದಾರಿಯಿಂದ ಚಂದ್ರ ಮೌಳೀಶ್ವರ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಬಸ್ ನಿಲ್ದಾಣದ ಬಳಿ ವಾಸ್ತವ್ಯವಿರುವ ಸದಾಶಿವ ಶೆಟ್ಟಿ ಮತ್ತು ಪತ್ನಿ ವಸಂತಿ ಶೆಟ್ಟಿಯವರ ಬಳಿ ಸೆ. 17 ರಂದು ಓರ್ವ ಅಪರಿಚಿತ ಬಂದು ಬೈಕ್ ನಲ್ಲಿ ಪೆಟ್ರೋಲ್ ಖಾಲಿಯಾಗಿದೆ.
ಪೆಟ್ರೋಲ್ ತುಂಬಿಸಲು ಬಾಟಲಿ ಬೇಕು ಎಂದು ಹೇಳಿದ್ದು, ಈ ಸಂದರ್ಭ ವಸಂತಿ ಶೆಟ್ಟಿ ನೀರಿನ ಖಾಲಿ ಬಾಟಲಿ ಕೊಟ್ಟಿದ್ದು ವ್ಯಕ್ತಿ ಅಲ್ಲಿಂದ ತೆರಳಿದ್ದಾನೆ.
ಸ್ವಲ್ಪ ಸಮಯದ ಬಳಿಕ ಮತ್ತೆ ಅದೇ ವ್ಯಕ್ತಿ ಬಂದು ಬೇರೆ ಬಾಟಲಿ ಕೇಳುವಂತೆ ತಿಳಿಸಿ ವಸಂತಿ ಶೆಟ್ಟಿ ಅವರು ಮನೆಯ ಹೊರಗಡೆ ಬರುವಷ್ಟರಲ್ಲಿ ಮೂವರು ದುಷ್ಕರ್ಮಿಗಳು ಕುತ್ತಿಗೆಯ ಬದಿ ಎರಡು ಚೂರಿಯಿಂದ ಬೆದರಿಸಿ 40 ಗ್ರಾಂ ತೂಕದ ಚಿನ್ನದ ಕರಿಮಣಿ ಸರವನ್ನು ಕಸಿದು ಪರಾರಿಯಾಗಿದ್ದರು.




