ಸಹಾಯಕ ನಿರ್ದೇಶಕ ರಸ್ತೆ ಅಪಘಾತದಲ್ಲಿ ಮೃತ್ಯು
ಚೆನ್ನೈ: ತಮಿಳಿನ ಖ್ಯಾತ ನಿರ್ದೇಶಕ ವೆಟ್ರಿಮಾರನ್ ಅವರ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಶರಣ್ ರಾಜ್ (26) ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗುರುವಾರ (ಜೂ.8 ರಂದು) ರಾತ್ರಿ 11:30 ರ ಹೊತ್ತಿಗೆ ಕೆ.ಕೆ. ನಗರ್ ನಲ್ಲಿ ತನ್ನ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ವೇಗವಾಗಿ ಬಂದ ಕಾರೊಂದು ಅವರ ಬೈಕ್ ಗೆ ಢಿಕ್ಕಿ ಹೊಡಿದಿದೆ. ಪರಿಣಾಮ ತೀವ್ರ ಸ್ವರೂಪದಲ್ಲಿ ಗಾಯಗೊಂಡ ಶರಣ್ ರಾಜ್ ಸ್ಥಳದಲ್ಲೇ ಪ್ರಾಣ ತೆತ್ತಿದ್ದಾರೆ.
ಸ್ಥಳೀಯರು ಕೂಡಲೇ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಾಲಿವುಡ್ ನಲ್ಲಿ ಸಹನಟನಾಗಿ ಗುರುತಿಸಿಕೊಂಡಿರುವ ಪಳನಿಯಪ್ಪನ್ ಅವರ ಕಾರು ಅಪಘಾತವನ್ನು ಎಸೆಗಿದೆ ಎನ್ನಲಾಗಿದೆ.
ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿದ ಪರಿಣಾಮ ಈ ಘಟನೆ ನಡೆದಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಸದ್ಯ ಪಳನಿಯಪ್ಪನ್ ಅವರನ್ನು ಬಂಧಿಸಲಾಗಿದೆ.




